ADVERTISEMENT

ಆತಂಕ ಸೃಷ್ಟಿಸಿದ ಕೊರೊನಾ ವೈರಸ್

ದುಬೈನಿಂದ ಮರಳಿದ ಯುವಕನ ಮನೆಗೆ ಭೇಟಿ ನೀಡಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 12:39 IST
Last Updated 13 ಮಾರ್ಚ್ 2020, 12:39 IST

ಶಿರಸಿ: ತಾಲ್ಲೂಕಿನ ಮೇಲಿನ ಇಸಳೂರಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಂದಿದ್ದ ವಿದ್ಯಾರ್ಥಿಯೊಬ್ಬ ಶುಕ್ರವಾರ ತರಗತಿಯಲ್ಲಿ ಕೆಮ್ಮಿದ ಪರಿಣಾಮ, ಉಳಿದ ಮಕ್ಕಳ ಪಾಲಕರು ಆತಂಕಗೊಂಡು ಶಾಲೆಯಲ್ಲಿ ಜಮಾಯಿಸಿ, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ವಾತಾವರಣ ತಿಳಿಗೊಳಿಸಿದರು.

ದುಬೈನಲ್ಲಿ ಕೆಲಸದಲ್ಲಿದ್ದ ಇಸಳೂರಿನ ಯುವಕನೊಬ್ಬ ಮಾ.4ರಂದು ಊರಿಗೆ ಮರಳಿದ್ದ. ಊರಿಗೆ ಬಂದ ಆತನ ಬಳಿ, 14 ದಿನ ಮನೆಯಲ್ಲೇ ಇರುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದರು. ಆದರೆ, ಹೊಟ್ಟೆಪಾಡಿಗಾಗಿ ಈ ಯುವಕ ಕೆಲಸಕ್ಕೆ ಹೋಗುತ್ತಿದ್ದ. ಈ ಯುವಕನ ಪಕ್ಕದ ಮನೆಯ ಬಾಲಕನೊಬ್ಬನಿಗೆ ಥಂಡಿ, ಕೆಮ್ಮು ಕಾಣಿಸಿಕೊಂಡಿತ್ತು. ಅದರ ನಡುವೆಯೇ ಶಾಲೆಗೆ ಬಂದಿದ್ದ ಬಾಲಕನಿಗೆ, ಅನಾರೋಗ್ಯವಾಗಿರುವ ವಿಷಯ ಊರೆಲ್ಲ ಹರಡಿತು. ದುಬೈನಿಂದ ಬಂದ ಯುವಕನ ಪಕ್ಕದ ಮನೆಯ ಬಾಲಕನಾಗಿದ್ದರಿಂದ, ಶಾಲೆಗೆ ಮಕ್ಕಳನ್ನು ಕಳುಹಿಸಿದ ಪಾಲಕರು ಆತಂಕಗೊಂಡರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ ಶಾಲೆಗೆ ಭೇಟಿ ನೀಡಿ, ಪಾಲಕರಿಗೆ ವಿಷಯ ಮನವರಿಕೆ ಮಾಡಿದರು. ನಂತರ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ಟ, ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ ಅವರು ಆಂಬುಲೆನ್ಸ್ ಸಹಿತ ಸ್ಥಳಕ್ಕೆ ಭೇಟಿ ನೀಡಿದರು. ದುಬೈನಿಂದ ಬಂದಿರುವ ಯುವಕ ಆರೋಗ್ಯವಾಗಿರುವುದನ್ನು ದೃಢಪಡಿಸಿಕೊಂಡರಲ್ಲದೇ, ಇನ್ನು ನಾಲ್ಕು ದಿನಗಳವರೆಗೆ ಮನೆಯಲ್ಲೇ ಇರುವಂತೆ ಆತನಿಗೆ ತಾಕೀತು ಮಾಡಿದರು.

ADVERTISEMENT

‘ಯುವಕನ ವೈದ್ಯಕೀಯ ವರದಿಯಲ್ಲಿ ಕೊರೊನಾ ವೈರಸ್ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಊಹಾಪೋಹದ ಸುದ್ದಿಗಳಿಗೆ ಕಿವಿಗೊಡಬಾರದು’ ಎಂದು ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.