ADVERTISEMENT

ಜೊಯಿಡಾ: ಕಾಡಾನೆ ದಾಳಿಗೆ ಭತ್ತ, ಕಬ್ಬು ಹಾನಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 15:25 IST
Last Updated 30 ಆಗಸ್ಟ್ 2024, 15:25 IST
ಜೊಯಿಡಾ ತಾಲ್ಲೂಕಿನ ಶಿಂಗರಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಲಗಾಂವ ಗ್ರಾಮದಲ್ಲಿ ಇತ್ತೀಚೆಗೆ ಕಾಡಾನೆಗಳ ದಾಳಿಗೆ ಹಾನಿಯಾದ ಕಬ್ಬಿನ ತೋಟ
ಜೊಯಿಡಾ ತಾಲ್ಲೂಕಿನ ಶಿಂಗರಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಲಗಾಂವ ಗ್ರಾಮದಲ್ಲಿ ಇತ್ತೀಚೆಗೆ ಕಾಡಾನೆಗಳ ದಾಳಿಗೆ ಹಾನಿಯಾದ ಕಬ್ಬಿನ ತೋಟ   

ಜೊಯಿಡಾ: ತಾಲ್ಲೂಕಿನ ಶಿಂಗರಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡುಲಗಾಂವನಲ್ಲಿ ಆನೆಗಳ ಹಿಂಡು ಭತ್ತ ಹಾಗೂ ಕಬ್ಬಿನ ಬೆಳೆಗೆ ಭಾರಿ ಹಾನಿಯಂಟು ಮಾಡುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸತತ ಎರಡು ದಿನಗಳಿಂದ ರಾತ್ರಿ ವೇಳೆಯಲ್ಲಿ ಆನೆಗಳ ಹಿಂಡು ಹೊಲಗಳಿಗೆ ನುಗ್ಗಿದ್ದರಿಂದ ಸುಮಾರು 15 ಎಕರೆಯಷ್ಟು ಭತ್ತ, 1 ಎಕರೆಯಷ್ಟು ಕಬ್ಬು ಬೆಳೆ ಹಾನಿಯಾಗಿದೆ. ಹೀಗಾಗಿ ಆನೆಗಳ ಹಾವಳಿಯನ್ನು ತ್ಪಪಿಸಬೇಕು ಎಂದು ರೈತರು ಆಗ್ರಸಿದ್ದಾರೆ.

‘ಕುಡುಲಗಾಂವ ಅರಣ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ಏಳು ಆನೆಗಳ ಹಿಂಡು ಬೀಡು ಬಿಟ್ಟಿದೆ. ಮಂಗಳವಾರ ಮತ್ತು ಬುಧವಾರ ರಾತ್ರಿ ವೇಳೆಯಲ್ಲಿ ಗ್ರಾಮದ ಬಳಿಯ ಗದ್ದೆಗೆ ಆನೆಗಳ ಹಿಂಡು ನುಗ್ಗಿದ್ದರಿಂದ ಪದ್ಮಾ ಪುಂಡಲೀಕ ಗಾವಡೆ, ಬಮ್ಮು ಲಕ್ಕು ಲಂಬೋರ, ಉಮಣ್ಣ ಗಾವಡೆ, ಶಿವಾಜಿ ಗಾವಡೆ, ಜ್ಯೋತಿಬಾ ಗವಸ, ವಿಠು ಜಂಗಲೆ, ಮಹೇಶ ಗಾವಡೆ, ಮಹಾದೇವ ಜಾಂಬಳೆ, ಪಾಂಡುರಂಗ ಜಾಂಬಳೆ, ರಾಮಚಂದ್ರ ಗೋಜಾರಿ ಎಂಬುವವರ ಭತ್ತದ ಕೃಷಿ ಭೂಮಿಯಲ್ಲಿ ಅಪಾರ ಪ್ರಮಾಣದಲ್ಲಿ ನಾಶಗೊಳಿಸಿದೆ’ ಎಂಬುದಾಗಿ ಸ್ಥಳೀಯ ಗ್ರಾಮಸ್ಥರು ದೂರಿದ್ದಾರೆ.

ADVERTISEMENT

‘ಒಂದು ಎಕರೆ ಕಬ್ಬಿನ ಬೆಳೆ ನಾಶವಾಗಿದೆ. ಜಮೀನಿನ ರಕ್ಷಣೆಗಾಗಿ ಜಮೀನಿನ ಬದಿಯಲ್ಲಿ ತಂತಿ ಬೇಲಿ ಹಾಕಿದ್ದು, ಆನೆಗಳ ಹಿಂಡು ಬೇಲಿ ಮುರಿದು ಆಗಷ್ಟೆ ಬೆಳೆದು ನಿಂತಿರುವ ಬೆಳೆಗೆ ಹಾನಿ ಮಾಡುತ್ತಿವೆ. ಸತತವಾಗಿ ಕಾಡುಪ್ರಾಣಿಗಳಿಂದ ಇಂತಹ ತೊಂದರೆಯಿಂದಾಗಿ ಕೃಷಿಯಲ್ಲಿ ಆಸಕ್ತಿ ಕಳೆದುಕೊಳ್ಳುವಂತಾಗಿದೆ’ ಎಂದು ರೈತ ಸಂತೋಷ ಕುಂಡೇಕರ ಬೇಸರ ತೋಡಿಕೊಂಡರು.

‘ಬರ್ಚಿ ಅರಣ್ಯ ವಲಯಕ್ಕೆ ಸಂಬಂಧಪಟ್ಟ ಅರಣ್ಯ ಪ್ರದೇಶದಲ್ಲಿ ಆನೆಗಳು ತಂಗಿದ್ದು, ಸಮೀಪದಲ್ಲಿನ ಕೃಷಿ ಭೂಮಿಗಳಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿವೆ ಎಂದು ದೂರಿದ್ದರೂ ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲ’ ಎಂದು ರೈತರು ದೂರಿದ್ದಾರೆ.

‘ಬೆಳೆ ಹಾನಿಯಾದ ಪ್ರದೇಶಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿ, ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಜನವಸತಿ ಪ್ರದೇಶದ ಬಳಿಯಿಮದ ಆನೆಗಳನ್ನು ಹಿಮ್ಮೆಟ್ಟಿಸುವ ಪ್ರಯತ್ನ ನಡೆಸಲು ಅಧಿಕಾರಿಗಳ ಅನುಮತಿ ಪಡೆದು ಕ್ರಮವಹಿಸುತ್ತೇವೆ’ ಎಂದು ಅರಣ್ಯಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಜೊಯಿಡಾ ತಾಲ್ಲೂಕಿನ ಶಿಂಗರಗಾಂವ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಡಲಗಾಂವ ಗ್ರಾಮದಲ್ಲಿ ಇತ್ತೀಚೆಗೆ ಕಾಡಾನೆಗಳ ದಾಳಿಗೆ ಹಾನಿಯಾದ ಭತ್ತದ ಗದ್ದೆ

Highlights - ಗ್ರಾಮಕ್ಕೆ ಸಮೀಪದ ಅರಣ್ಯದಲ್ಲಿ ಬೀಡುಬಿಟ್ಟ ಏಳು ಆನೆಗಳ ಹಿಂಡು 15 ಎಕರೆ ಭತ್ತ, 1 ಎಕರೆ ಕಬ್ಬು ಹಾನಿ ಅರಣ್ಯಾಧಿಕಾರಿಗಳಿಂದ ಸ್ಪಂದನೆ ಸಿಗದ ಆರೋಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.