ಹಳಿಯಾಳ: ‘ಬಿಜೆಪಿ, ಜೆಡಿಎಸ್ ವರಿಷ್ಠರ ಜತೆ ನಿರಂತರ ಸಂಪರ್ಕ ಹೊಂದಿದ್ದು ಪಕ್ಷಕ್ಕೆ ಸೇರ್ಪಡೆಗೊಳ್ಳಲು ಎರಡೂ ಪಕ್ಷಗಳಿಗೂ ಮನವಿ ಸಲ್ಲಿಸಿದ್ದೇನೆ. ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಿತ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್.ಘೋಟ್ನೇಕರ್ ಹೇಳಿದರು.
‘ಬಿಜೆಪಿ ನಿಯಮಾವಳಿಯಂತೆ ಪಕ್ಷದ ಸ್ಥಳೀಯ ಘಟಕಕ್ಕೆ ಪ್ರಸ್ತಾವ, ಮನವಿ ಸಲ್ಲಿಸಬೇಕು. ಹೀಗಾಗಿ ಸೋಮವಾರ ಬಿಜೆಪಿಯ ಸ್ಥಳೀಯ ನಾಯಕರನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿದ್ದೇನೆ’ ಎಂದು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟಪಡಿಸಿದರು.
‘ಅಭ್ಯರ್ಥಿಯಾಗಲು ಅವಕಾಶ ನೀಡುವಂತೆ ಜೆಡಿಎಸ್, ಬಿಜೆಪಿ ಮುಖಂಡರಿಗೆ ಮನವಿ ಮಾಡಿಕೊಂಡಿದ್ದೇನೆ. ಯಾವ ಪಕ್ಷ ಅವಕಾಶ ನೀಡಲಿದೆ ಎಂಬುದನ್ನು ಗಮನಿಸಿ ನಾಲ್ಕು ದಿನದಲ್ಲಿ ನಿರ್ಧಾರ ಸ್ಪಷ್ಟಪಡಿಸಲಾಗುವುದು’ ಎಂದರು.
‘ಮರಡಿಗುಡ್ಡದ ಹತ್ತಿರದ ಈದ್ಗಾ ಮೈದಾನ ಹಾಗೂ ಬನ್ನಿ ಮಂಟಪ ಸೂಕ್ಮ ಪ್ರದೇಶವಾಗಿದ್ದು, ಈ ಹಿಂದೆ ತಾವು ಪುರಸಭೆಯಲ್ಲಿ ಅಧ್ಯಕ್ಷನಾಗಿದ್ದ ವೇಳೆ ಯಾವುದೇ ಧರ್ಮಕ್ಕೆ ತೊಂದರೆ ಆಗದಂತೆ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲು ಠರಾವು ಮಾಡಲಾಗಿತ್ತು. ಪುರಸಭೆಯಿಂದ ಬನ್ನಿ ಮಂಟಪದ ಜಾಗದಲ್ಲಿ ಪೇವರ್ಸ್ ಅಳವಡಿಸಿರುವುದು ಖಂಡನೀಯ’ ಎಂದರು.
ಮುಖಂಡರಾದ ಯಲ್ಲಪ್ಪ ಮಾಳವಣಕರ, ಗುಲಾಬಶ್ಯಾ ಲತೀಫನವರ, ತುಕಾರಾಮ ಗೌಡ, ವಿ.ಎಂ.ಘಾಡಿ, ವಾಮನ ಮಿರಾಶಿ, ಸುರೇಶ ಶಿವಣ್ಣವರ, ಭರತ್ ಪಾಟೀಲ, ದಿನೇಶ್ ಹಳದೂಳಕರ, ಮುನ್ನಾ ಶೆಂಡೆವಾಲೆ, ಪಿ.ಎಸ್ ದಾನಪ್ಪನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.