ಹಳಿಯಾಳ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ನಿಯಂತ್ರಿಸಲು ಪೋಲಿಸರು ನಡೆಸಿದ ಗೋಲಿಬಾರ್ ದುರದೃಷ್ಟಕರ. ಪೋಲಿಸರು ತಾಳ್ಮೆ ಕಳೆದುಕೊಂಡು ನಡೆಸಿದ ಗೋಲಿಬಾರ್ಗೆ ಇಬ್ಬರು ಪ್ರತಿಭಟನಾಕಾರರು ಪ್ರಾಣ ಕಳೆದುಕೊಂಡಿದ್ದಾರೆ. ಪೊಲೀಸರ ಈ ಕ್ರಮ ಖಂಡನೀಯ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಸಂವಿಧಾನಾತ್ಮಕವಾಗಿ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು. ಪೊಲೀಸರು ತಾಳ್ಮೆಗೆಡದೇ, ಪ್ರತಿಭಟನಾಕಾರರ ಮನವೊಲಿಸಬೇಕಾಗಿತ್ತು. ಏಕಾಏಕಿ ಗೋಲಿಬಾರ್ ನಡೆಸುವ ಮೂಲಕ ಪ್ರತಿಭಟನೆ ಇನ್ನಷ್ಟು ಉಗ್ರರೂಪ ಪಡೆದುಕೊಳ್ಳಲು ಪೊಲೀಸರೇ ಕಾರಣರಾಗಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಾರ್ವಜನಿಕರು ಪ್ರತಿಭಟನೆ ನಡೆಸುವ ವೇಳೆ ಆಸ್ತಿ–ಪಾಸ್ತಿಗೆ ಧಕ್ಕೆಯಾಗದಂತೆ ವರ್ತಿಸಬೇಕು. ಸರ್ಕಾರ ಕಾನೂನು ಸುವ್ಯವಸ್ಥೆಗೆ ಒತ್ತು ನೀಡಬೇಕು. ಗೋಲಿಬಾರ್ನಲ್ಲಿ ಮೃತಪಟ್ಟ ಅಮಾಯಕರ ಕುಟುಂಬಕ್ಕೆ ಪರಿಹಾರ ನೀಡಬೇಕು. ಬೆಂಗಳೂರಿನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಇತಿಹಾಸ ತಜ್ಞ ರಾಮಚಂದ್ರ ಗುಹಾ, ಯೋಗೇಂದ್ರ ಯಾದವ್ ಅವರನ್ನು ಬಂಧಿಸಿರುವ ಕ್ರಮ ಖಂಡನೀಯ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.