ಮುಂಡಗೋಡ: ಯಲ್ಲಾಪುರ ಹಾಗೂ ಮುಂಡಗೋಡ ಅರಣ್ಯ ವ್ಯಾಪ್ತಿಯಲ್ಲಿ 20–25 ಕಾಡಾನೆಗಳು ಸಂಚರಿಸುತ್ತಿವೆ. ಅವುತಾಲ್ಲೂಕಿನಲ್ಲಿ ಎರಡು ಗುಂಪುಗಳಾಗಿ ಕಾಣಿಸಿಕೊಂಡಿದ್ದು, ಒಟ್ಟು ಮೂರು ಮರಿ ಆನೆಗಳಿವೆ.
ಪ್ರತಿ ವರ್ಷ ದಾಂಡೇಲಿ ಅಭಯಾರಣ್ಯದಿಂದ ಕಾಡಾನೆಗಳು ಹಳಿಯಾಳ, ಯಲ್ಲಾಪುರ, ಮುಂಡಗೋಡ, ಹಾನಗಲ್ ಹಾಗೂ ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಸಂಚಾರ ನಡೆಸುತ್ತವೆ. 4–5 ತಿಂಗಳು ಗಜಪಡೆಯ ಸಂಚಾರದಿಂದ ಆನೆ– ಮಾನವ ಸಂಘರ್ಷ ನಿರಂತರವಾಗಿರುತ್ತದೆ.
ಬೆಳೆ ಹಾನಿ:ತಾಲ್ಲೂಕಿನ ಕುದುರೆನಾಳ, ಬಡ್ಡಿಗೇರಿ, ಕ್ಯಾತ್ನಳ್ಳಿಯಲ್ಲಿ ಆನೆಗಳ ಹಿಂಡು ಗುರುವಾರ ರಾತ್ರಿ ಗದ್ದೆ, ತೋಟಗಳಿಗೆ ದಾಳಿ ಮಾಡಿವೆ. ಅಡಿಕೆ ಗಿಡಗಳು ಹಾಗೂ ಭತ್ತದ ಬೆಳೆ ಹಾನಿಯಾಗಿದೆ.ನಾಲ್ಕೈದು ದಿನಗಳಿಂದ ಉಪಟಳ ಮುಂದುವರೆದಿದೆ.
ಇಪಿಟಿಯನ್ನು ದಾಟುತ್ತಿರುವ ಗಜಪಡೆ: ಆನೆಗಳು ನಿರ್ದಿಷ್ಟ ಮಾರ್ಗದಲ್ಲೇ ಸಂಚರಿಸುತ್ತವೆ.ಅವುಮಾರ್ಗವನ್ನು ಬದಲಿಸಿ ಜನವಸತಿಯತ್ತ ಬರಬಾರದು ಎಂದು ಪ್ರತಿ ವರ್ಷ ಇಂತಿಷ್ಟು ಕಿಲೋಮೀಟರ್ ಇಪಿಟಿ (ಎಲಿಫೆಂಟ್ ಪ್ರೂಫ್ ಟ್ರೆಂಚ್) ಮಾಡಿರುತ್ತಾರೆ. ಆದರೆ, ಅವುಗಳನ್ನು ನಿರ್ಮಿಸಿದ ವರ್ಷ ಆನೆಗಳು ಅತ್ತ ಸುಳಿಯುವುದಿಲ್ಲ. ಕ್ರಮೇಣ ಮಣ್ಣು ಕುಸಿದು, ಕಾಡಿನಲ್ಲಿ ಅನಧಿಕೃತವಾಗಿ ಓಡಾಡಲು ದಾರಿ ಮಾಡುವುದುಮುಂತಾದ ಕಾರಣಗಳಿಂದಇಪಿಟಿಯ ಅಗಲ ಕಡಿಮೆಯಾಗುತ್ತದೆ. ಅಲ್ಲಿಪುನಃ ಆನೆಗಳು ಅದೇ ದಾರಿಯಲ್ಲಿ ಓಡಾಡಲು ಆರಂಭಿಸುತ್ತವೆ ಎನ್ನುತ್ತಾರೆ ವನ್ಯಜೀವಿ ಸಂರಕ್ಷಣೆ ಮತ್ತು ಸಂಶೋಧನೆ ಸೊಸೈಟಿಯ ಪ್ರತಿನಿಧಿ ರವಿ ಯಲ್ಲಾಪುರ.
‘ಗುಂಜಾವತಿ ಅರಣ್ಯ ವ್ಯಾಪ್ತಿಯಲ್ಲಿ ಅಗಲವಾದ ಇಪಿಟಿಯನ್ನೇ ಆನೆಗಳು ದಾಟಿವೆ. ಹಿಂಡಿನಲ್ಲಿ ಮುಂದಿರುವ ಆನೆ ದಾಟುತ್ತಿದ್ದಂತೆ ಉಳಿದವುಗಳು ಅದನ್ನು ಹಿಂಬಾಲಿಸುತ್ತವೆ’ ಎಂದರು.
ಆನೆಗಳ ಪತ್ತೆಗೆ ಸುಲಭ ಸಾಧನ: ಟ್ರಿಪ್ ಅಲಾರ್ಮ್ಎನ್ನುವ ಸಾಧನವನ್ನು ಅಳವಡಿಸಿದರೆ ಆನೆಗಳು ಬಂದಿರುವುದು ಗೊತ್ತಾಗುತ್ತದೆ. ಸುಮಾರು ಒಂದು ಕಿಲೋ ಮೀಟರ್ವರೆಗೆ ಅಲಾರ್ಮ್ಶಬ್ದ ಕೇಳಿಸುತ್ತದೆ.100 ಮೀಟರ್ ವ್ಯಾಪ್ತಿವರೆಗೆ ಆನೆಗಳು ಸಂಚಾರ ನಡೆಸಿದರೂ ಇದರಲ್ಲಿ ಸೈರನ್ ಮೊಳಗುತ್ತದೆ.
‘ಹಳಿಯಾಳ, ಯಲ್ಲಾಪುರ ಉಪವಿಭಾಗದಲ್ಲಿ ಸುಮಾರು 800 ರೈತರು ಈ ಸಾಧನವನ್ನು ಅಳವಡಿಸಿಕೊಂಡಿದ್ದಾರೆ. ಕೇವಲ ₹ 400–500ಕ್ಕೆ ಸಿಗುವ ಉಪಕರಣ 3–4 ವರ್ಷಗಳ ಕಾಲ ಬಾಳಿಕೆ ಬರುತ್ತದೆ’ ಎಂದು ರವಿ ಯಲ್ಲಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.