ಮುಂಡಗೋಡ:ವೇದಿಕೆಯ ಮುಂಭಾಗದಲ್ಲಿ ಆಲಂಕಾರಿಕ ಹೂವುಗಳ ಬದಲಿಗೆ ಸಾಲು ಸಾಲಾಗಿ ಸಸಿಗಳನ್ನು ಇಡಲಾಗಿತ್ತು. ಆಶೀರ್ವಾದ ಮಾಡಲು ಬಂದ ಅತಿಥಿಗಳಿಗೆ, ಕೈಯಲ್ಲೊಂದು ಸಸಿ ನೀಡಿ ಪರಿಸರದ ಜಾಗೃತಿ ಮೂಡಿಸಲಾಯಿತು.
ನವದಾಂಪತ್ಯಕ್ಕೆ ಕಾಲಿಡಲು ಸಜ್ಜಾಗಿದ್ದ ವಧು–ವರರ ಜೋಡಿ ಕಲ್ಯಾಣ ಮಂಟಪ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರೆರೆದರು. ಅಕ್ಷತೆ ಹಾಕಿಸಿಕೊಳ್ಳುವ ಮುನ್ನ ಹೊಸ ಜೋಡಿಗಳು ‘ನೇತ್ರದಾನ’ ಮಾಡುವ ಪತ್ರಕ್ಕೆ ಸಹಿ ಹಾಕಿ, ಸಾರ್ಥಕ ಮದುವೆ ಸಮಾರಂಭಕ್ಕೆ ಸಾಕ್ಷಿಯಾದರು.
ಇಲ್ಲಿನ ದೈವಜ್ಞ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಮೂಲಿಮನಿ (ಕುರುಹಿನಶೆಟ್ಟಿ) ಹಾಗೂ ಮತ್ತಿಗಟ್ಟಿ ಬಂಧುಗಳ ಕುಟುಂಬದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಇಂತಹ ದೃಶ್ಯ ಕಂಡುಬಂತು. ಚನ್ನಬಸಪ್ಪ ಜೊತೆ ಕವಿತಾ ಹಾಗೂ ಮಹಾದೇವ ಜೊತೆ ಸವಿತಾ ಹೊಸ ಜೀವನಕ್ಕೆ ಕಾಲಿಟ್ಟರು. ಬೆಳ್ಳಿ, ಬಂಗಾರ, ಸೀರೆ, ದುಡ್ಡು ಎಂಬ ಮಾತುಗಳೇ ಮದುವೆ ಸಮಾರಂಭದಲ್ಲಿ ಕೇಳಿಸುವುದು ಸಾಮಾನ್ಯ. ಇಲ್ಲಿ ಮಾತ್ರ ಪರಿಸರ ಜಾಗೃತಿ, ನೇತ್ರದಾನದ ಬಗ್ಗೆ ಸ್ವಾಮೀಜಿ, ಅರಣ್ಯಾಧಿಕಾರಿ, ವೈದ್ಯರು ಒಂದು ಗಂಟೆ ಕಾಲ ತಿಳಿವಳಿಕೆ ನೀಡಿದರು.
ಹಳೆ ಹುಬ್ಬಳ್ಳಿ ನೀಲಕಂಠಮಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ನೂತನ ವಧು ವರರನ್ನು ಆಶೀರ್ವದಿಸಿದರು. ‘ಇದೇ ಮೊದಲ ಬಾರಿಗೆ ಸಸಿ ನೀಡುವ ಹಾಗೂ ನೇತ್ರದಾನದಂಥವೈಶಿಷ್ಟ್ಯವಿರುವಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವೆ. ಎಲ್ಲರಿಗೂ ಪ್ರೇರಣೆ ಆಗುವಂಥ ಕಾರ್ಯಕ್ರಮವಿದು’ ಎಂದು ಮೆಚ್ಚುಗೆ ಸೂಚಿಸಿದರು.
ಎಂ.ಎಂ.ಜೋಶಿ ಆಸ್ಪತ್ರೆಯ ಡಾ.ಸಂಗಮೇಶ ಸಾಲಿಮಠ ಮಾತನಾಡಿ, ‘ನೇತ್ರದಾನದ ಬಗ್ಗೆ ಮದುವೆಯಲ್ಲಿ ತಿಳಿವಳಿಕೆ ಮೂಡಿಸುತ್ತಿರುವುದು ಸಾಮಾಜಿಕ ಕಳಕಳಿಗೆ ಹಿಡಿದ ಕೈಗನ್ನಡಿಯಾಗಿದೆ. ಒಬ್ಬರು ನೇತ್ರದಾನ ಮಾಡುವುದರಿಂದ ಕಾರ್ನಿಯಾ ಅಂಧತ್ವದಿಂದ ಬಳಲುತ್ತಿರುವ ಇಬ್ಬರಿಗೆ ಬೆಳಕು ನೀಡಬಹುದು. ಇಲ್ಲಿ 67 ಜನರು ನೇತ್ರದಾನ ವಾಗ್ದಾನ ಪತ್ರಕ್ಕೆ ಸಹಿ ಹಾಕಿದ್ದಾರೆ’ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.