ADVERTISEMENT

ದೀಪದ ನೆಣೆ ಹೊತ್ತೊಯ್ದ ಇಲಿ: ಅಂಗಡಿಯಲ್ಲಿ ಅಗ್ನಿ ಅವಘಡ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 5:39 IST
Last Updated 11 ಜೂನ್ 2021, 5:39 IST
   

ಯಲ್ಲಾಪುರ: ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅನಾಹುತಕ್ಕೆ ಪಟ್ಟಣದ ಬಾಳಗಿ ಕಾಂಪ್ಲೆಕ್ಸ್‌ನಲ್ಲಿರುವ ಎಲೆಕ್ಟ್ರಿಕಲ್ಸ್ ಅಂಗಡಿ ಗುರುವಾರ ತಡರಾತ್ರಿ ಸುಟ್ಟು ಹೋಗಿದೆ. ದೇವರ ಚಿತ್ರದ ಎದುರಿನ ದೀಪದ ನೆಣೆಯು (ಬತ್ತಿ) ಉರಿಯುತ್ತಿರುವಾಗಲೇ ಇಲಿ ಎತ್ತಿಕೊಂಡು ಹೋದ ಪರಿಣಾಮ ಬೇರೆ ವಸ್ತುಗಳಿಗೆ ಬೆಂಕಿ ತಗುಲಿ ಅವಘಡ ಸಂಭವಿಸಿರಬಹುದು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಶಂಕಿಸಿದ್ದಾರೆ.

ಡಿ.ಟಿ ರಸ್ತೆಯಲ್ಲಿಯ ಪಟ್ಟಣ ಪಂಚಾಯ್ತಿ ಕಚೇರಿ ಸಮೀಪದ, ದಿನೇಶ ರೇವಣಕರ್ ಅವರಿಗೆ ಸೇರಿದ ಅನುರಾಗ ಎಲೆಕ್ಟ್ರಿಕಲ್ಸ್ ಅಂಗಡಿಯಲ್ಲಿ ಅವಘಡ ನಡೆದಿದೆ. ಸ್ಥಳೀಯರು ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಸಿಬ್ಬಂದಿಯ ತಂಡ ಬೆಂಕಿ ನಂದಿಸಿತು.

ಲಕ್ಷಾಂತರ ರೂಪಾಯಿ ಬೆಲೆಬಾಳುವ ಎಲೆಕ್ಟ್ರಿಕಲ್ ವಸ್ತುಗಳು ಸುಟ್ಟು ಕರಕಲಾಗಿವೆ. ಹಲವು ವಸ್ತುಗಳನ್ನು ಅಗ್ನಿಶಾಮಕದಳದವರು ಬೆಂಕಿಯಿಂದ ಬಚಾವು ಮಾಡಿದ್ದಾರೆ. ತಕ್ಷಣ ಬೆಂಕಿ ನಂದಿಸಿದ ಪರಿಣಾಮ ಅದೇ ವಾಣಿಜ್ಯ ಸಂಕೀರ್ಣದಲ್ಲಿ ಇರುವ ಇನ್ನಿತರ ಅಂಗಡಿಗಳಿಗೆ ಬೆಂಕಿ ಹರಡುವುದು ತಪ್ಪಿದೆ ಎಂದು ಪ್ರಭಾರ ಠಾಣಾಧಿಕಾರಿ ಭೀಮರಾವ್ ಉಪ್ಪಾರ್ ತಿಳಿಸಿದ್ದಾರೆ.

ADVERTISEMENT

ಪ್ರಮುಖ ಅಗ್ನಿಶಾಮಕ ಪದ್ಮನಾಭ ಕಾಂಚನ್, ಚಾಲಕ ತಂತ್ರಜ್ಞ ಜಯಸಿಂಹ ತೋಪನ್ನವರ್, ಚಾಲಕ ರವಿ ಹವಾಲ್ದಾರ್, ಅಗ್ನಿಶಾಮಕರಾದ ನಾಗೇಶ ದೇವಡಿಗ, ಅಡವೆಪ್ಪ ಪುಂಜದ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.