ADVERTISEMENT

ಅರಣ್ಯ ಸಚಿವರ ಆದೇಶ ಅವೈಜ್ಞಾನಿಕ: ರವೀಂದ್ರ ನಾಯ್ಕ

ಅರಣ್ಯದಲ್ಲಿ ಜಾನುವಾರು ಮೇಯುವಿಕೆಗೆ ನಿರ್ಬಂಧಕ್ಕೆ ತೀವ್ರ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 2:55 IST
Last Updated 24 ಜುಲೈ 2025, 2:55 IST
ರವೀಂದ್ರ ನಾಯ್ಕ 
ರವೀಂದ್ರ ನಾಯ್ಕ    

ಶಿರಸಿ: ‘ರಾಜ್ಯದ ಅರಣ್ಯ ಪ್ರದೇಶದಲ್ಲಿ ದನಕರು ಮೇಯಿಸುವುದನ್ನು ನಿಷೇಧಿಸುವಂತೆ ಸಚಿವ ಈಶ್ವರ ಖಂಡ್ರೆ ಹೊರಡಿಸಿರುವ  ಆದೇಶವು ಅವೈಜ್ಞಾನಿಕವಾಗಿದ್ದು, ಜಾನುವಾರು ಮೇಯುವುದನ್ನು ಸಂಪೂರ್ಣ ನಿಯಂತ್ರಿಸಲು ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅರಣ್ಯ ಸಚಿವರ ಹೇಳಿಕೆಗೆ ಬುಧವಾರ ತೀವ್ರ ಪ್ರತಿಕ್ರಿಯೆ ನೀಡಿರುವ ಅವರು, ‘ಬಳಕೆದಾರರು ಜಾನುವಾರಗಳನ್ನು ನಿರ್ದಿಷ್ಟ ಅರಣ್ಯ ಪ್ರದೇಶದಲ್ಲಿ ಮೇಯಿಸುವ ಅನುಮತಿ ಹಕ್ಕನ್ನು ಹೊಂದಿದ್ದಾರೆ. ಮೇಯಿಸುವ ಹಕ್ಕುಗಳು ದೇಶದಲ್ಲಿ, ವಿದೇಶಗಳಲ್ಲಿ ಹಾಗೂ ಕೋರ್ಟ್ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳನ್ನಾಗಿ ಪರಿವರ್ತಿಸಿಕೊಂಡಿರುವುದು ವಿವಿಧ ಕಾನೂನುಗಳಲ್ಲಿ ದಾಖಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಶೇ29ರಷ್ಟು ಇರುವ ಸಂರಕ್ಷಿತ ಅರಣ್ಯ ಹಾಗೂ ಶೇ 18ರಷ್ಟು ಇರುವ ವರ್ಗಿಕರಿಸದ ಅರಣ್ಯ ಪ್ರದೇಶಗಳಲ್ಲಿ ಮೇಯಿಸದಕ್ಕೆ ನಿರ್ಬಂಧಿಸುವ ಪೂರ್ಣಪ್ರಮಾಣದ ಅಧಿಕಾರ ಸರ್ಕಾರಕ್ಕಿಲ್ಲ. ಸರ್ಕಾರದ ನಿಯಮ ಮತ್ತು ಅನುಮತಿ ಪ್ರಕಾರ ಮೇಯಿಸಲು ಅವಕಾಶವಿರುತ್ತದೆ. ಇಂತ ನಿಯಮಗಳ ಅರಣ್ಯ ಸಂರಕ್ಷಣೆ  ಮಟ್ಟ ಮತ್ತು ಅರಣ್ಯ ಪ್ರಕಾರದ ಮೇಲೆ ಅವಲಂಬಿತವಾಗಿತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ADVERTISEMENT

ಜಿಲ್ಲಾ, ಗ್ರಾಮ, ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಮುಕ್ತ ವಲಯವನ್ನು ಪ್ರತಿ ವರ್ಷ ಪರವಾನಿಗೆ ಮೇರೆಗೆ ಮೇಯಿಸುವ ಪ್ರದೇಶವೆಂದು ಪ್ರಕಟಿಸುವ ಗ್ರಾಮದ ಸಮಿತಿ ಜತೆ ಯೋಜನೆಗಳ ಮೂಲಕ ಗುರುತಿಸುವ ಅವಕಾಶವಿದ್ದಾಗಲೂ, ಟಿಪ್ಪಣೆ ಮೂಲಕ ಹೊಸ ಸೂಚನೆ ನೀಡಿರುವುದು ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಅರಣ್ಯದಲ್ಲಿ ಜಾನುವಾರು ಮೇಯಿಸುವಿಕೆಯ ಕಾನೂನಾತ್ಮಕ ಪರಿಹಾರಕ್ಕೆ ಅರಣ್ಯ ಸಚಿವರು ಅರಣ್ಯ ಪ್ರದೇಶದಲ್ಲಿ  ಮೇಯಿಸುವಿಕೆಯ ವಲಯ ಎಂದು ಪ್ರತ್ಯೇಕ ಸ್ಥಳ ಗುರುತಿಸಬೇಕು
ರವೀಂದ್ರ ನಾಯ್ಕ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ

ಮೇಯಿಸುವ ಹಕ್ಕು ಸಮೂಹ ಹಕ್ಕು

‘ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರಣ್ಯದಲ್ಲಿ ವಾಸಿಸುವ ಸಮುದಾಯಗಳಿಗೆ ಕೆಲವು ಹಕ್ಕುಗಳನ್ನು ಗುರುತಿಸಲಾಗಿದೆ. ಇದರಲ್ಲಿ ಮೇಯಿಸುವ ಹಕ್ಕು ಸಮೂಹ ಹಕ್ಕು ಎಂದು ಗುರುತಿಸಲಾಗಿದೆ. ಇವುಗಳನ್ನು ಸಾಮಾನ್ಯವಾಗಿ ಸಮೂದಾಯ ಹಕ್ಕುಗಳು ಎಂದು ಪರಿಗಣಿಸಲಾಗುತ್ತದೆ. ಈ ಹಕ್ಕುಗಳು ವಿವಿಧ ಪ್ರಕಾರದ ಅರಣ್ಯ ಭೂಮಿಯಲ್ಲಿ ಮೇಯಿಸಲು ಬಳಸಲು ಅವಕಾಶ ನೀಡಿದೆ. ಅಲ್ಲದೇ ಮೇವು ಉತ್ಪನ್ನಗಳನ್ನು ಸಂಗ್ರಹಿಸಲು ಅರಣ್ಯ ಹಕ್ಕು ಕಾಯ್ದೆಯಲ್ಲಿ ಅವಕಾಶವಿದೆ. ಜೀವನೋಪಾಯಕ್ಕೆ ಅವಿಭಾಜ್ಯವಾಗಿರುವುದು ಮೇಯಿಸುವಿಕೆಗೆ ಸೇರಿದಂಥ ಸಂಪ್ರದಾಯಿಕ ಪದ್ಧತಿಗಳನ್ನು ರಕ್ಷಿಸಲು ಅರಣ್ಯ ಹಕ್ಕು ಕಾಯ್ದೆ ಗುರಿ ಆಗಿದೆ’ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.