ಕಾರವಾರ: ಹಳಿಯಾಳ ತಾಲ್ಲೂಕಿನ ವಿರ್ನೋಲಿಯ (ಪನ್ಸೋಲಿ ವ್ಯಾಪ್ತಿ) ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ವಿಚಾರವಾಗಿ ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಮತ್ತು ಸ್ಥಳೀಯರಿಬ್ಬರ ನಡುವೆ ಸೋಮವಾರ ಸಂಜೆ ಹೊಡೆದಾಟವಾಗಿದೆ.
ಗ್ರಾಮಸ್ಥರಾದ ಕೃಷ್ಣ ಶೆಡೇಕರ್ ಮತ್ತು ದೇವರಾಜ ಧರಣಿ ಎಂಬುವವರು ಸಂರಕ್ಷಿತ ಅರಣ್ಯದಲ್ಲಿ ಇದ್ದುದನ್ನು ಅರಣ್ಯ ರಕ್ಷಕರಾದ ಸಂದೀಪ ಗೌಡ, ಬಸವನಗೌಡ ಪ್ರಶ್ನಿಸಿದರು. ಈ ವಿಚಾರ ಮಾತಿಗೆ ಮಾತು ಬೆಳೆದು ಬಡಿದಾಡಿಕೊಳ್ಳುವ ಹಂತಕ್ಕೆ ಹೋಯಿತು. ಗಲಾಟೆಯಲ್ಲಿ ಸಂದೀಪ ಗೌಡ ಮತ್ತು ಕೃಷ್ಣ ಶೆಡೇಕರ್ ಅವರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಇಬ್ಬರನ್ನು ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮಸ್ಥರ ವಿರುದ್ಧ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅವರ ವಿರುದ್ಧ ಗ್ರಾಮಸ್ಥರು ದೂರು ಪ್ರತಿ ದೂರು ನೀಡಿದ್ದಾರೆ. ದಾಂಡೇಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.