ಮುಂಡಗೋಡ: ಇಲ್ಲಿನ ದೈವಜ್ಞ ಸಮಾಜದವರ 31ನೇ ವರ್ಷದ ಸಾರ್ವಜನಿಕ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡವರೂ ಕುಣಿಯುವಂತೆ ಮಾಡಿದ್ದು ಮಹಿಳೆಯರ ಚಂಡೆ ವಾದ್ಯ. ಮೆರವಣಿಗೆಗೆ ವಿಶೇಷ ಮೆರುಗು ತಂದಿದ್ದು ದೈವಜ್ಞ ಸಮಾಜದ ‘ದುಂಧುಬಿ’ ಸದಸ್ಯೆಯರು. ಜತೆಗೆ ಗಣೇಶ, ಶಿವ ಪಾರ್ವತಿ ಸಹಿತ ದೇವಾನುದೇವತೆಗಳು ಭೂಲೋಕಕ್ಕೆ ಬಂದಿದ್ದಾರೆ ಎಂಬಂತೆ ಭಟ್ಕಳದ ಮಾರುತಿ ಕಲಾ ತಂಡದವರ ದೇವತಾ ವೇಷ ಮತ್ತಷ್ಟು ಭಕ್ತಿ ಹೆಚ್ಚಿಸಲು ಕಾರಣವಾಯಿತು.
ಭಾರತೀಯ ಸಂಸ್ಕೃತಿ, ಪರಂಪರೆಗೆ ಹೆಚ್ಚಿನ ಒತ್ತು ನೀಡುವ ಮೂಲಕ, ಮೆರವಣಿಗೆಯನ್ನು ಜನರು ಮನತುಂಬಿ ವೀಕ್ಷಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಸಣ್ಣ ಸಣ್ಣ ಸೌಂಡ್ ಬಾಕ್ಸ್ಗಳನ್ನು ಹೊತ್ತು ಸಾಗುತ್ತಿದ್ದ ವಾಹನದ ಹಿಂದೆ ಚಿಣ್ಣರು ಹಾಡಿಗೆ ಕುಣಿದರು. ಚಿಣ್ಣರ ಸಂತಸ ಹೆಚ್ಚಿಸಲು ಜೋಕರ್ಸ್ ವೇಷಧಾರಿಗಳು ಮಕ್ಕಳ ಜೊತೆ ಮಕ್ಕಳಾದರು.
ದೇವತಾ ವೇಷಗಳನ್ನು ಅಲಂಕರಿಸಿದ್ದ ಕಲಾ ತಂಡದ ಸದಸ್ಯರು ಮೆರವಣಿಗೆಯಲ್ಲಿ ವಿಶೇಷವಾಗಿ ಆಕರ್ಷಿಸಿದರು. ಮಕ್ಕಳು, ಮಹಿಳೆಯರಿಂದ ಹಿಡಿದು ಎಲ್ಲರೂ ದೇವತಾ ವೇಷಧಾರಿಗಳೊಂದಿಗೆ ‘ಸೆಲ್ಫಿ’ ತೆಗೆದುಕೊಳ್ಳುತ್ತಿರುವುದು ಕಂಡುಬಂತು. ಭಾರತೀಯ ಕಲೆ, ಸಂಸ್ಕೃತಿ ಬಿಂಬಿಸುತ್ತ ಹೆಜ್ಜೆ ಹಾಕಿದ ಕಲಾ ತಂಡದ ಸದಸ್ಯರು ಒಂದೆಡೆಯಾದರೆ, ಹಾಡಿಗೆ ಕುಣಿಯುತ್ತ ಚಿಣ್ಣರು ಮುಂದೆ ಮುಂದೆ ಸಾಗುತ್ತಿರುವುದು ಮತ್ತೊಂದೆಡೆ ಕಂಡುಬಂತು. ಸಿಡಿಮದ್ದು ಸುಡುವುದು, ಡಿಜೆ ಸದ್ದಿಗೆ ಕಡಿಮೆ ಮಹತ್ವ ನೀಡಿದ ದೈವಜ್ಞ ಸಮಾಜದವರ ಗಣಪತಿ ವಿಸರ್ಜನಾ ಮೆರವಣಿಗೆ ಜನರ ಮೆಚ್ಚುಗೆಗೆ ಕಾರಣವಾಯಿತು.
‘ನಾಲ್ಕೈದು ಗಂಟೆಗಳ ಕಾಲ ನಡೆದ ಗಣೇಶ ವಿಸರ್ಜನಾ ಮೆರವಣಿಗೆಯು, ಎಲ್ಲರೂ ಭಕ್ತಿಭಾವದಿಂದ ಪಾಲ್ಗೊಳ್ಳುವಂತೆ ಮಾಡಿದೆ. ಕಲೆ, ಸಂಸ್ಕೃತಿ ಬಿಂಬಿಸುವಂತ ಮೆರವಣಿಗೆ ಮಾಡಿರುವುದು ಸಂತಸದ ವಿಷಯ’ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಧರ ಉಪ್ಪಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.