ADVERTISEMENT

ಕಾರವಾರ: ಭೌಗೋಳಿಕ ಗುರುತು ಪಡೆದ ಕರಿ ಇಷಾಡ

ಅಂತರಾಷ್ಟ್ರೀಯ ಮಾನ್ಯತೆ ಪಡೆದ ಜಿಲ್ಲೆಯ ಎರಡನೇ ಬೆಳೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2023, 16:13 IST
Last Updated 4 ಏಪ್ರಿಲ್ 2023, 16:13 IST
ಅಂಕೋಲಾದಲ್ಲಿ ಕಳೆದ ವರ್ಷ ನಡೆದ ಮಾವು ಮೇಳದಲ್ಲಿ ಕರಿ ಇಷಾಡ ಹಣ್ಣುಗಳನ್ನು ಮಾರಾಟಕ್ಕೆ ಇಡಲಾಗಿತ್ತು.
ಅಂಕೋಲಾದಲ್ಲಿ ಕಳೆದ ವರ್ಷ ನಡೆದ ಮಾವು ಮೇಳದಲ್ಲಿ ಕರಿ ಇಷಾಡ ಹಣ್ಣುಗಳನ್ನು ಮಾರಾಟಕ್ಕೆ ಇಡಲಾಗಿತ್ತು.   

ಕಾರವಾರ: ಅಂಕೋಲಾದ ಕರಿ ಇಷಾಡ ಮಾವಿನ ಹಣ್ಣಿಗೆ ಭೌಗೋಳಿಕ ಗುರುತು (ಜಿ.ಐ ಟ್ಯಾಗ್) ದೊರೆತಿದ್ದು ಶಿರಸಿ ಸುಪಾರಿ ಬಳಿಕ ಈ ಗುರುತು ಪಡೆದ ಜಿಲ್ಲೆಯ ಎರಡನೆ ಬೆಳೆಯಾಗಿದೆ.

ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಲಾಖರಯ ಕಂಟ್ರೋಲರ್ ಜನರಲ್ ಆಫ್ ಪೇಟೆಂಟ್ಸ್, ಡಿಸೈನ್ಸ್ ಮತ್ತು ಟ್ರೇಡ್ ಮಾರ್ಕ್ ಸಂಸ್ಥೆ ತನ್ನ ಅಧಿಕೃತ ವೆಬ್‍ಸೈಟ್‍ನಲ್ಲಿ ಕರಿ ಇಷಾಡ ಮಾವಿನ ಹಣ್ಣನ್ನು ಜಿ.ಐ ಟ್ಯಾಗ್‍ಗೆ ಪರಿಗಣಿಸಿರುವ ಮಾಹಿತಿ ಪ್ರಕಟಿಸಿದೆ. 2032ರ ಮಾರ್ಚ್‍ವರೆಗೆ ಜಿ.ಐ ಟ್ಯಾಗ್‍ಗೆ ಪರಿಗಣಿಸುವುದಾಗಿ ಸಂಸ್ಥೆ ತಿಳಿಸಿದೆ.

ಅಂಕೋಲಾ ತಾಲ್ಲೂಕಿನಲ್ಲಿ ಸುಮಾರು 80 ಹೆಕ್ಟೇರ್ ಪ್ರದೇಶದಲ್ಲಿ ಈ ತಳಿಯ ಮಾವಿನ ಹಣ್ಣು ಬೆಳೆಯಲಾಗುತ್ತಿದೆ. ಬೇರೆಲ್ಲೂ ಸಿಗದ ಕರಿ ಇಷಾಡಕ್ಕೆ ಭಾರಿ ಬೇಡಿಕೆಯೂ ಇದೆ. ಇದೀಗ ಭೌಗೋಳಿಕ ಗುರುತು ಪಡೆಯುವ ಮೂಲಕ ವಿಶಿಷ್ಟ ಬೆಳೆ ಎಂಬುದು ಅಧಿಕೃತವಾಗಿ ಸಾಬೀತುಗೊಂಡಿದೆ.

ADVERTISEMENT

ಸಂಸದ ಅನಂತಕುಮಾರ ಹೆಗಡೆ ಸೂಚನೆ ಮೇರೆಗೆ ತೋಟಗಾರಿಕಾ ಇಲಾಖೆ, ನಬಾರ್ಡ್ ನೆರವಿನೊಂದಿಗೆ ಕರಿ ಇಷಾಡಕ್ಕೆ ಜಿ.ಐ. ಟ್ಯಾಗ್ ಪಡೆಯಲು ಪ್ರಯತ್ನ ನಡೆಸಿತ್ತು. ಈ ಸಂಬಂಧ ಅಂಕೋಲಾದ ಮಾತಾ ತೋಟಗಾರ್ಸ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಪರಿಸರ ತಜ್ಞ ಶಿವಾನಂದ ಕಳವೆ ಒದಗಿಸಿದ ದಾಖಲೆಯ ಸಹಾಯದೊಂದಿಗೆ ಜಿ.ಐ. ಟ್ಯಾಗ್‍ಗೆ ಅರ್ಜಿ ಸಲ್ಲಿಸಿತ್ತು.

‘ಜಿ.ಐ. ಟ್ಯಾಗ್ ಪ್ರಮಾಣ ಪತ್ರ ಇನ್ನಷ್ಟೆ ಲಭಿಸಬೇಕಿದ್ದು, ಈಗಾಗಲೆ ಅಧಿಕೃತ ವೆಬ್‍ಸೈಟ್‍ನಲ್ಲಿ ಮಾನ್ಯತೆ ಲಭಿಸಿರುವುದು ಪ್ರಕಟವಾಗಿದೆ. ನಬಾರ್ಡ್ ಸಹಯೋಗದೊಂದಿಗೆ ಭೌಗೋಳಿಕ ಗುರುತು ಪಟ್ಟ ಪಡೆಯಲು ತಾಂತ್ರಿಕ ಸಹಾಯಗಳನ್ನು ಒದಗಿಸಲಾಗಿತ್ತು’ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.