ADVERTISEMENT

ಸಂಚಾರ ಮಾರ್ಗದಲ್ಲಿ ಬದಲಾವಣೆ

ಪಾರ್ಕಿಂಗ್ ನಿಯಮ ಉಲ್ಲಂಘಿಸಿದರೆ ದಂಡ: ಸಿ.ಟಿ. ನಾಯ್ಕ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 7:57 IST
Last Updated 5 ಜನವರಿ 2021, 7:57 IST
ಗೋಕರ್ಣದ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲ್ಲೂಕಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸಿ.ಟಿ. ನಾಯ್ಕ ಹಾಗೂ ಇತರರು
ಗೋಕರ್ಣದ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲ್ಲೂಕಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸಿ.ಟಿ. ನಾಯ್ಕ ಹಾಗೂ ಇತರರು   

ಗೋಕರ್ಣ: ಇಲ್ಲಿಯ ಮೇನ್ ಬೀಚ್‌ಗೆ ಹೋಗುವ ಮಾರ್ಗದಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದ್ದು ವಾಹನ ಸಂಚಾರದ ದಟ್ಟಣೆಯಿಂದ ಕಾಮಗಾರಿ ನಡೆಸಲು ತೊಂದರೆಯಾಗುತ್ತಿದೆ. ಜ 5ರಿಂದ ವಾಹನದ ಸಂಚಾರ ಮಾರ್ಗದಲ್ಲಿ ಬದಲಾವಣೆ ತರಲಾಗುವುದು ಎಂದು ತಾಲ್ಲೂಕಾ ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಸಿ.ಟಿ. ನಾಯ್ಕ ತಿಳಿಸಿದ್ದಾರೆ.

ಅವರು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರವಾಸಿಗರು ಪಾರ್ಕಿಂಗ್ ಸ್ಥಳ ಬಿಟ್ಟು ಬೇರೆಡೆ ವಾಹನ ನಿಲ್ಲಿಸಿದರೆ ದಂಡ ಹಾಕಲಾಗುವುದು. ಮೇನ್ ಬೀಚ್‌ನಲ್ಲಿ ವಾಹನ ಪಾರ್ಕಿಂಗ್ ಗೆ ಸ್ಥಳ ನಿಗದಿಪಡಿಸಲಾಗಿದೆ. ರಥಬೀದಿಯಿಂದ ಏಕಮುಖ ಸಂಚಾರ ರಸ್ತೆಯಲ್ಲಿ ಸಾಗಿ ಮೀನು ಮಾರುಕಟ್ಟೆ ರಸ್ತೆಯಿಂದ ಮೇನ್ ಬೀಚ್‌ಗೆ ಹೋಗಬೇಕು. ಸೇತುವೆ ಕಾಮಗಾರಿ ಮುಗಿಯುವ ತನಕ ದೇವಸ್ಥಾನದ ಮುಂದಿನಿಂದ ಬೀಚ್‌ಗೆ ಹೋಗಲು ದ್ವಿಚಕ್ರ ವಾಹನದ ಸಮೇತ ಎಲ್ಲಾ ವಾಹನಗಳಿಗೂ ನಿರ್ಬಂಧಿಸಲಾಗಿದೆ. ಸ್ಥಳೀಯರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದರು.

ಸಾರ್ವಜನಿಕರಿಂದ ನಿರೀಕ್ಷಿತ ಮಟ್ಟದಲ್ಲಿ ಹಸಿ ತ್ಯಾಜ್ಯ ಸಂಗ್ರಹವಾಗದ ಕಾರಣ ಕೆಲವು ದಿನಗಳ ಮಟ್ಟಿಗೆ ಹಸಿ ತ್ಯಾಜ್ಯ ಘಟಕವನ್ನು ಮುಚ್ಚಲಾಗುವುದು. ಮಂಗಳವಾರದಿಂದ ಹಸಿ ತ್ಯಾಜ್ಯ ಸಂಗ್ರಹಿಸುವುದಿಲ್ಲ ಎಂದು ತಿಳಿಸಿದರು. ಸ್ವಚ್ಛತೆ ಇಲ್ಲದಿರುವ ಬಗ್ಗೆ ಅನೇಕ ದೂರುಗಳು ಬಂದಿದ್ದು ಸಾರ್ವಜನಿಕರು ಗ್ರಾಮ ಪಂಚಾಯ್ತಿಯೊಂದಿಗೆ ಸಹಕರಿಸಬೇಕು. ರಸ್ತೆಯ ಮೇಲೆ ಕಸ ಹಾಕದೇ ಸ್ವಚ್ಛತೆ ಕಾಪಾಡಲು ನಾಗರಿಕರು ಕೈಜೋಡಿಸಬೇಕು ಎಂದು ವಿನಂತಿಸಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ನಿರ್ವಹಣಾಧಿಕಾರಿ ಆರ್.ಜಿ. ಗುನಗಿ, ಲೋಕೋಪಯೋಗಿ ಎಂಜಿನಿಯರ್‌ ಶಶಿಕಾಂತ ಕೋಳೆಕರ್, ತಾಲ್ಲೂಕಾ ಪಂಚಾಯಿತಿ ಸದಸ್ಯ ಮಹೇಶ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.