ದಾಂಡೇಲಿ: ನಗರದಲ್ಲಿ ಸೋಮವಾರ ಸಂಜೆ ಆರು ಗಂಟೆಗೆ ಸುಮಾರಿಗೆ ಪ್ರಾರಂಭವಾದ ಗುಡುಗು ಸಹಿತ ಗಾಳಿ, ಮಳೆ ಎರಡು ತಾಸು ಸುರಿಯಿತು.
ಅನಿರೀಕ್ಷಿತವಾಗಿ ಬಂದ ಮಳೆಗೆ ನಗರ ಜೆ.ಎನ್.ರಸ್ತೆ, ಚೆನ್ನಮ್ಮ ವೃತ್ತ, ಸೋಮಾನಿ ವೃತ್ತದ ಪಕ್ಕದ ಚರಂಡಿಯ ನೀರು ರಸ್ತೆಯ ಮೇಲೆ ಹರಿಯಿತು. ನಗರಸಭೆಯು ಗಟಾರದ ಹೂಳು ತೆಗೆಯದ ಕಾರಣ ಅವಾಂತರವಾಗಿದೆ ಎಂದು ನಾಗರಿಕರು ದೂರಿದರು.
ಹಳಿಯಾಳ ರಸ್ತೆಯ ಮೂರು ನಂಬರ್ ಗೇಟ್ ಬಳಿ ಇರುವ ಶ್ರೀನಿವಾಸ ನಾಯರ್ ಎಂಬುವವರ ಮನೆಗೆ ಗಟಾರದ ನೀರು ನುಗ್ಗಿತು. ಮನೆಯಲ್ಲಿದ್ದ ದಿನಸಿ ಸಾಮಗ್ರಿ ನೀರು ಪಾಲಾದವು. ಅದೇ ರಸ್ತೆಯ ಚಹಾ ಅಂಗಡಿಯಲ್ಲಿ ಎರಡು ಅಡಿಗಳಿಗಿಂತ ಹೆಚ್ಚು ನೀರು ತುಂಬಿಕೊಂಡಿತ್ತು. ಕೆಲವು ಕಡೆ ಮರಗಳ ಸಣ್ಣಪುಟ್ಟ ಟೊಂಗೆಗಳು ಮುರಿದು ಬಿದ್ದಿವೆ.
ಶಿರಸಿ, ಸಿದ್ದಾಪುರ ಹಾಗೂ ಮುಂಡಗೋಡದಲ್ಲೂ ಸೋಮವಾರ ಮಳೆಯಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.