ಶಿರಸಿ:ಹನ್ನೆರಡು ವರ್ಷಗಳ ಹಿಂದೆ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಗಳಿಬ್ಬರು ಶನಿವಾರ ನಡೆದ ಲೋಕ್ ಅದಾಲತ್ನಲ್ಲಿ ಒಗ್ಗೂಡುವ ಮೂಲಕ ಸಂತಸದ ಕ್ಷಣಕ್ಕೆ ಸಾಕ್ಷಿಯಾದರು.
ಇಲ್ಲಿನ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಡೆದ ಅದಾಲತ್ನಲ್ಲಿ ದೇವಿಸರ ಗ್ರಾಮದ ವ್ಯಕ್ತಿ ಮತ್ತು ಗಣೇಶ ನಗರದ ಮಹಿಳೆ ಪುನಃ ಜತೆಯಾದರು. ಇದಕ್ಕೆ ಅವರ 17 ವರ್ಷದ ಮಗಳು ಕೂಡ ಸಾಕ್ಷಿಯಾದರು. ಮಗಳು ಒಂದೂವರೆ ವರ್ಷದ ಪುಟ್ಟ ಮಗುವಾಗಿದ್ದ ವೇಳೆ ಪತಿ, ಪತ್ನಿ ಕಾರಣಾಂತರದಿಂದ ದೂರವಾಗಿದ್ದರು. ವಿಚ್ಛೇದನ ಪ್ರಕರಣ ದಾಖಲಿಸಿದ್ದ ಪತ್ನಿ ಪತಿಯಿಂದ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು.
ಜೀವನಾಂಶ ನೀಡದ ಪತಿ ಒಂದು ಬಾರಿ ಈ ಕಾರಣಕ್ಕೆ ಜೈಲು ಶಿಕ್ಷೆಯನ್ನೂ ಅನುಭವಿಸಿ ಬಂದಿದ್ದರು. ಈಚೆಗೆ ಪಿಯುಸಿ ಓದುತ್ತಿರುವ ಅವರ ಮಗಳು ತಂದೆ–ತಾಯಿಯನ್ನು ಒಗ್ಗೂಡಿಸಲು ನಿರಂತರ ಪ್ರಯತ್ನ ಪಟ್ಟಿದ್ದಳು. ಈಕೆಯ ಸಂಧಾನದ ಫಲವಾಗಿ ಅದಾಲತ್ನಲ್ಲಿ ಪಾಲ್ಗೊಂಡಿದ್ದ ಪತಿ ಮತ್ತು ಪತ್ನಿ ಇಬ್ಬರೂ ಪ್ರಕರಣ ಹಿಂಪಡೆದುಕೊಂಡರು.
ಇಂತದ್ದೇ ಇನ್ನೊಂದು ಪ್ರಕರಣವೂ ರಾಜಿ ಸಂಧಾನದಲ್ಲಿ ಇತ್ಯರ್ಥವಾಯಿತು. ಪತಿಯಿಂದ ಜೀವನಾಂಶ ಕೋರಿ ಬಾಳೆಗದ್ದೆಯ ಯುವತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯುವ ಮೂಲಕ ಮರಾಠಿಕೊಪ್ಪದ ನಿವಾಸಿಯಾಗಿರುವ ತಮ್ಮ ಪತಿಯೊಂದಿಗೆ ಪುನಃ ಸಂಸಾರ ನಡೆಸುವುದಾಗಿ ವಾಗ್ದಾನ ಮಾಡಿದರು.
ಲೋಕ್ ಅದಾಲತ್ನಲ್ಲಿ ಶಿರಸಿಯ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ವ್ಯಾಪ್ತಿಯಲ್ಲಿರುವ ನ್ಯಾಯಾಲಯಗಳಲ್ಲಿ 820 ಪ್ರಕರಣಗಳು ಇತ್ಯರ್ಥಗೊಂಡವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.