ಸಿದ್ದಾಪುರ: ಅರಣ್ಯವಾಸಿಗಳು ಅರಣ್ಯಭೂಮಿ ಸಾಗುವಳಿ ಜೊತೆಯಲ್ಲಿ ಪರಿಸರ ಉಳಿಸಿ, ಬೆಳೆಸುವ ಕಾರ್ಯದಲ್ಲಿ ಭಾಗಿಯಾಗಬೇಕಿದೆ. ಕಾಡು ಮಲೆನಾಡಿನ ಐಶ್ವರ್ಯ ಅಲ್ಲದೇ, ಬದುಕಿನ ಭಾಗವಾಗಿದೆ. ಕಾಡು ಇದ್ದರೇ ನಾಡು ಎಂದು ಚಿಂತಕ ಕಾಗೋಡ ತಿಮ್ಮಪ್ಪ ಹೇಳಿದರು.
ತಾಲ್ಲೂಕಿನ ಬೇಡ್ಕಣಿಯ ಹನುಮಂತ ದೇವಾಲಯದ ಆವರಣದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ದಶಲಕ್ಷ ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮರ ಬಿಟ್ಟು ಮಾನವನಿಲ್ಲ, ಮಾನವನಿಲ್ಲದೇ ಮರವಿಲ್ಲ. ಇಂದಿನ ಜೀವನದಲ್ಲಿ ಪರಿಸರ ಜಾಗೃತಿಗೆ ಅರಣ್ಯವಾಸಿಗಳು ಗಿಡ ನೆಡುವ ಕಾರ್ಯ ಪ್ರಶಂಸನೀಯ. ಅರಣ್ಯವಾಸಿಗಳು ಭೂಮಿ ಹಕ್ಕಿನ ಹೋರಾಟಕ್ಕೆ ನೀಡುವ ಪ್ರಾಮುಖ್ಯತೆಯಷ್ಟೇ, ಪರಿಸರ ಉಳಿಸಿ ಬೆಳೆಸುವುದಕ್ಕೂ ಸಮಯ ನೀಡಬೇಕು ಎಂದರು.
ಹಿರಿಯರಾದ ತಿಮ್ಮಣ ನಾಯ್ಕ ಕಡಕೇರಿ, ವಿ.ಎನ್ ನಾಯ್ಕ ಬಿಳಾನೆ, ಜಗದೀಶ ನಾಯ್ಕ ಶಿರಲಗಿ, ಹರಿರರ ನಾಯ್ಕ ಓಂಕಾರ, ರಾಘವೇಂದ್ರ ಕವಂಚೂರು ಮಾತನಾಡಿದರು.
ಗ್ರೀನ್ ಕಾರ್ಡ್ ಪ್ರಮುಖ ದಿನೇಶ ನಾಯ್ಕ ಬೇಡ್ಕಣಿ, ಸುಧಾಕರ ಮಡಿವಾಳ, ಜಯಂತ ನಾಯ್ಕ ಕಾನಗೋಡ, ಕಮಲಾಕರ್ ತ್ಯಾರ್ಸಿ, ಚಂದ್ರು ಚೆನ್ನಯ್ಯ, ರಾಮಚಂದ್ರ ನಾಯ್ಕ ತ್ಯಾಗಲೆಮನೆ ಇದ್ದರು.
ದಶಲಕ್ಷ ಗಿಡ ನೆಡುವ ಅಭಿಯಾನ ಇಂದಿನಿಂದ ಆರಂಭಗೊಂಡು 15 ದಿನಗಳವರೆಗೆ ಜಿಲ್ಲೆಯಾದ್ಯಂತ ಗ್ರಾಮೀಣ ಭಾಗದಲ್ಲಿ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.