ADVERTISEMENT

ತಾಯ್ನಾಡು ತಲುಪಿದ ಸಂಭ್ರಮ

ಬಹ್ರೈನ್‌ನಲ್ಲಿ ಸಿಲುಕಿದ್ದ ಕನ್ನಡಿಗರು

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 12:30 IST
Last Updated 14 ಜೂನ್ 2020, 12:30 IST
ಬಹ್ರೈನ್‌ನಿಂದ ತಾಯ್ನಾಡಿಗೆ ಹೊರಡುವ ಮುನ್ನ ಭಾರತದ ಧ್ವಜ ಪ್ರದರ್ಶಿಸಿದ ಕನ್ನಡಿಗರು
ಬಹ್ರೈನ್‌ನಿಂದ ತಾಯ್ನಾಡಿಗೆ ಹೊರಡುವ ಮುನ್ನ ಭಾರತದ ಧ್ವಜ ಪ್ರದರ್ಶಿಸಿದ ಕನ್ನಡಿಗರು   

ಯಲ್ಲಾಪುರ: ಕೋವಿಡ್ 19ನಿಂದ ಸಮಸ್ಯೆಗೆ ಸಿಲುಕಿದ್ದ ಬಹ್ರೈನ್‌ನಲ್ಲಿದ್ದ ಕನ್ನಡಿಗರು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ವಾಪಸಾತಿ ವಿಮಾನದಲ್ಲಿ ಶನಿವಾರ ಬೆಂಗಳೂರು ತಲುಪಿದರು.

ವಂದೇ ಭಾರತ್ ಮಿಷನ್ ಅಡಿಯಲ್ಲಿ 169 ಜನರನ್ನು ಹೊತ್ತ ಈ ವಿಮಾನ ಬಹ್ರೈನ್‍ನ ಮನಾಮಾ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10.40ಕ್ಕೆ ಹೊರಟು ಸಂಜೆ 6ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದೆ. ಈ ವಿಮಾನದಲ್ಲಿ ಬಹುಪಾಲು ಗರ್ಭಿಣಿಯರು, ವಯಸ್ಕರು, ಮಹಿಳೆಯರು, ಮಕ್ಕಳು, ಪ್ರವಾಸಕ್ಕೆ ಬಂದು ಸಿಲುಕಿಕೊಂಡವರು, ಆರೋಗ್ಯದ ತೊಂದರೆಯುಳ್ಳವರು ಮತ್ತು ಉದ್ಯೋಗ ಕಳೆದುಕೊಂಡ ಕನ್ನಡಿಗರು ಇದ್ದರು ಎಂದು ಕಿರಣ್ ಉಪಾಧ್ಯಾಯ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಬಹ್ರೈನ್ ಕನ್ನಡ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಉಪಾಧ್ಯಕ್ಷ ಡಿ.ರಮೇಶ್, ಕಾರ್ಯದರ್ಶಿ ಕಿರಣ್ ಉಪಾಧ್ಯಾಯ ಅವರು ಬಹ್ರೈನ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಶುಭ ಕೋರಿದರು. ‘ಮೂರು ತಿಂಗಳುಗಳಿಂದ ರಾಜ್ಯಕ್ಕೆ ಮರಳಲು ಅವರು ಕಾಯುತ್ತಿದ್ದರು. ಬಹ್ರೈನ್‍ನ ಭಾರತೀಯ ದೂತಾವಾಸ ಮತ್ತು ಕನ್ನಡ ಸಂಘದ ಕಾರ್ಯವನ್ನು ಅವರು ಶ್ಲಾಘಿಸಿದರು. ಬಹ್ರೈನ್‍ನಲ್ಲಿ ಸಿಲುಕಿಕೊಂಡವರು ತಾಯ್ನಾಡಿಗೆ ಮರಳಲು ಅನುಕೂಲ ಮಾಡಿಕೊಡುವಂತೆ ಅಧ್ಯಕ್ಷ ಪ್ರದೀಪ್ ಶೆಟ್ಟಿ ಅವರು, ಬಹ್ರೈನ್‍ನಲ್ಲಿರುವ ಭಾರತೀಯ ದೂತಾವಾಸ, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಕೇಂದ್ರ ಸಚಿವ ಸದಾನಂದ ಗೌಡ, ಸಂಸದರಾದ ಅನಂತಕುಮಾರ ಹೆಗಡೆ, ನಳಿನ್‌ಕುಮಾರ ಕಟೀಲ್ ಮೊದಲಾದವರನ್ನು ವಿನಂತಿಸಿದ್ದರು’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.