ಜೊಯಿಡಾ: ‘ಪಡಿತರ ತರಲು 28 ಕಿ.ಮೀ ದೂರದಲ್ಲಿರುವ ತಾಲ್ಲೂಕು ಕೇಂದ್ರ ಜೊಯಿಡಾಕ್ಕೆ, ಸಣ್ಣ ಪುಟ್ಟ ಕೆಲಸಕ್ಕೆ 30 ಕಿ.ಮೀ ದೂರದಲ್ಲಿರುವ ಗ್ರಾಮ ಪಂಚಾಯ್ತಿ ಕಚೇರಿಗೆ ಅಲೆಯಬೇಕು. 50 ಪ್ರಯಾಣಿಕರ ಸಾಮರ್ಥ್ಯದ ಮಿನಿ ಬಸ್ಸಿನಲ್ಲಿ ಪ್ರತಿ ದಿನ ನೂರಕ್ಕೂ ಹೆಚ್ಚು ಜನರು ಒಂಟಿ ಕಾಲಿನಲ್ಲಿ ನಿಂತು ಪ್ರಯಾಣಿಸಬೇಕು’
ಇದು ತಾಲ್ಲೂಕಿನ ನಾಗೋಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಂಜೊಯಿಡಾ ಗ್ರಾಮದ ವಾಗೇಲಿ, ಖಾನಗಾವ, ಕಾರ್ಟೋಳಿ, ಮಾರ್ಲಿ, ಕಸಬಾ, ಬುಳಬುಳೆ, ಮುಡಿಯೆ ಜನರ ಪ್ರತಿದಿನದ ಗೋಳು.
ಸುಮಾರು 700 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಒಂದು ಹಿರಿಯ ಪ್ರಾಥಮಿಕ ಶಾಲೆ, ಮೂರು ಕಿರಿಯ ಪ್ರಾಥಮಿಕ ಶಾಲೆಗಳಿವೆ. ಕೇವಲ ಇಬ್ಬರು ಕಾಯಂ ಶಿಕ್ಷಕರು, ಐದು ಅತಿಥಿ ಶಿಕ್ಷಕರಿಂದ ಶಾಲೆ ನಡೆಸುವ ಸ್ಥಿತಿ ಇದೆ. ಪ್ರೌಢ ಶಿಕ್ಷಣಕ್ಕೆ ದೂರದ ಜೊಯಿಡಾಗೆ ಬರಬೇಕಾದ ಅನಿವಾರ್ಯತೆ ಇಲ್ಲಿನ ವಿದ್ಯಾರ್ಥಿಗಳದ್ದು.
‘ಗ್ರಾಮ ಪಂಚಾಯಿತಿ ಕಚೇರಿಗೆ ಸಾಗಬೇಕೆಂದರೆ ಕಿರವತ್ತಿ, ಜೊಯಿಡಾ ಮೂಲಕ ಸುಮಾರು 32 ಕಿ.ಮೀ ದೂರ ಸಾಗಿ ನಾಗೋಡಾ ಗ್ರಾಮ ಪಂಚಾಯಿತಿಗೆ ತೆರಳಬೇಕು. ಸೂಪಾ ಅಣೆಕಟ್ಟೆ ನಿರ್ಮಾಣ ಪೂರ್ವದಲ್ಲಿ ಗ್ರಾಮವನ್ನು ವಿಂಗಡಣೆ ಮಾಡಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ಖಾನಗಾವ ಸಮೀಪದಲ್ಲಿ ಹಳೆ ಡಿಗ್ಗಿ ರಸ್ತೆಗೆ ಸುಮಾರು 2 ಕಿ.ಮೀ ಉದ್ದ ಕಾಳಿ ಹಿನ್ನೀರಿಗೆ ಸೇತುವೆ ಕಟ್ಟಿದರೆ ಗ್ರಾಮ ಪಂಚಾಯಿತಿಯ ದಾರಿ 5 ಕಿ.ಮೀ ಆಗುತ್ತದೆ’ ಎನ್ನುತ್ತಾರೆ ಸ್ಥಳೀಯರು.
‘ಸರ್ಕಾರ ಉಚಿತವಾಗಿ ಅಕ್ಕಿ ನೀಡುತ್ತಿದೆ. ಆದರೆ ಅದನ್ನು ಪಡೆಯಲು ನಾವು ₹ 100 ಖರ್ಚು ಮಾಡಿ 28 ಕಿ.ಮೀ ದೂರಕ್ಕೆ ಹೋಗಬೇಕಾಗುತ್ತಿದೆ’ ಎಂದೂ ಸಮಸ್ಯೆ ಬಿಚ್ಚಿಡುತ್ತಾರೆ.
‘ಕುಂಬಾರವಾಡ, ಗಾಂಗೋಡಾ, ಜೊಯಿಡಾ ಗ್ರಾಮ ಪಂಚಾಯಿತಿಗಳನ್ನು ದಾಟಿ ನಾಗೋಡಾ ಗ್ರಾಮ ಪಂಚಾಯಿತಿಗೆ ತಲುಬೇಕಾಗುತ್ತಿದೆ. ಹಳೆ ಡಿಗ್ಗಿ ರಸ್ತೆಗೆ ಸೇತುವೆ ನಿರ್ಮಿಸಿದರೆ ದೂರ ಕಡಿಮೆಯಾಗುತ್ತದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ದಿಗಂಬರ ದೇಸಾಯಿ.
‘ಉಳವಿ–ಗೋವಾಗಡಿ ರಾಜ್ಯ ಹೆದ್ದಾರಿಯನ್ನು ಇಲ್ಲಿನ ಜನ ಸಂಚಾರಕ್ಕಾಗಿ ಅವಲಂಬಿಸಿದ್ದು ನಿರ್ವಹಣೆ ಇಲ್ಲದೆ ಹಾಳಾಗಿದೆ. ಕಿರವತ್ತಿಯಿಂದ ಡಿಗ್ಗಿ ರಸ್ತೆಯನ್ನು ಸಂಪೂರ್ಣ ನಿರ್ಲಕ್ಷ್ಯಿಸಿ ಅಭಿವೃದ್ಧಿ ಮಾಡುತ್ತಿಲ್ಲ’ ಎಂಬುದು ಅವರ ದೂರು.
Cut-off box - ಬಸ್ ಸಮಸ್ಯೆ:ವಿದ್ಯಾರ್ಥಿಗಳಿಗೆ ತೊಂದರೆ ‘ಜನರ ಆಗ್ರಹಕ್ಕೆ ಕಳೆದ ವರ್ಷದಿಂದ ಈ ಭಾಗಕ್ಕೆ ಜೊಯಿಡಾದಿಂದ ವಾಗೇಲಿಯವರೆಗೆ ಮಿನಿ ಬಸ್ ಬಿಡಲಾಗುತ್ತಿದೆ. ವಿವಿಧ ಹಳ್ಳಿಗಳಿಂದ ಶಾಲಾ ಕಾಲೇಜಿಗೆ ಸುಮಾರು 35 ವಿದ್ಯಾರ್ಥಿಗಳ ಜತೆಗೆ ಜನರು ಸಂಚರಿಸಲು ಇದೇ ಬಸ್ ಅವಲಂಬಿಸಬೇಕಾಗಿದೆ. ಇದರಿಂದ ಬಸ್ ದಟ್ಟಣೆಯಲ್ಲೇ ಸಂಚರಿಸುತ್ತಿದೆ’ ಎನ್ನುತ್ತಾರೆ ಕಾರ್ಟೋಳಿಯ ಪ್ರೇಮಾನಂದ ವೇಳಿಪ. ‘ಒಂದೊಂದು ದಿನ ಸಂಜೆ ಸರಿಯಾದ ಸಮಯಕ್ಕೆ ಬಸ್ ಬರುವುದಿಲ್ಲ. ಮನೆ ಸೇರಲು ತಡರಾತ್ರಿಯಾಗುತ್ತಿದೆ. ವ್ಯಾಸಂಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ’ ಎಂದು ಪಿಯು ವಿದ್ಯಾರ್ಥಿ ನರೇಶ ಸಾವಂತ ಅಳಲು ತೋಡಿಕೊಂಡರು. ‘ಕಾರ್ಟೋಳಿಗೆ ಹೆಚ್ಚುವರಿ ಬಸ್ ಬಿಡುವ ಕುರಿತು ಧಾರವಾಡ ಸಾರಿಗೆ ಘಟಕದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ದಾಂಡೇಲಿ ಸಾರಿಗೆ ಘಟಕದ ವ್ಯವಸ್ಥಾಪಕ ಎಚ್.ಎಲ್.ರಾಠೋಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.