ಕಾರವಾರ: ಹೊನ್ನಾವರ ತಾಲ್ಲೂಕಿನ ಕಾಸರಕೋಡು ಕಡಲತೀರವು ಪ್ರತಿಷ್ಠಿತ ‘ಬ್ಲೂ ಫ್ಲ್ಯಾಗ್’ ಪ್ರಮಾಣಪತ್ರವನ್ನು ಈ ವರ್ಷವೂ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಗಮನ ಸೆಳೆದಿದೆ.
ಈ ಕಡಲತೀರವು‘ಬ್ಲೂ ಫ್ಲ್ಯಾಗ್’ ಗರಿಮೆಯೊಂದಿಗೆ 2020ರ ಡಿ.28ರಂದು ಉದ್ಘಾಟನೆಯಾಗಿತ್ತು. ಬಳಿಕ ಪ್ರತಿನಿತ್ಯವೂ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದರು. ಈ ವರ್ಷ ಮೇ ತಿಂಗಳಲ್ಲಿ ಬೀಸಿದ್ದ ‘ತೌತೆ’ ಚಂಡಮಾರುತದಿಂದ ಕಡಲ ಕಿನಾರೆಗೆ ಸ್ವಲ್ಪ ಮಟ್ಟಿನ ಹಾನಿಯಾಗಿತ್ತು. ಅದನ್ನು ಜಿಲ್ಲಾಡಳಿತವು ದುರಸ್ತಿ ಮಾಡಿ, ಗುಣಮಟ್ಟ ಕಾಯ್ದುಕೊಂಡಿತ್ತು.
ಕಡಲಕಿನಾರೆಯ ನಿರ್ವಹಣೆಯನ್ನು ಪರಿಶೀಲಿಸಿದಅಂತರರಾಷ್ಟ್ರೀಯ ಸಮಿತಿಯು, ಪ್ರಮಾಣಪತ್ರ ಮಂಜೂರು ಮಾಡಿದೆ. ಇದೇರೀತಿ, ಉಡುಪಿ ಜಿಲ್ಲೆಯ ಪಡುಬಿದ್ರಿಯ ಕಡಲತೀರಕ್ಕೂ ‘ಬ್ಲೂ ಫ್ಲ್ಯಾಗ್’ ಮನ್ನಣೆ ಮುಂದುವರಿದಿದೆ. ಈ ಬಗ್ಗೆ ಕೇಂದ್ರ ಪರಿಸರ ಖಾತೆ ಸಚಿವ ಭೂಪೇಂದರ್ ಯಾದವ್ ಟ್ವೀಟ್ ಮಾಡಿದ್ದಾರೆ.
ಡೆನ್ಮಾರ್ಕ್ನ ಕೋಪನ್ ಹೆಗನ್ನಲ್ಲಿರುವ ‘ಪರಿಸರ ಶಿಕ್ಷಣಕ್ಕಾಗಿ ವೇದಿಕೆ’ಯು (ಎಫ್.ಇ.ಇ) ಜಾಗತಿಕ ಮಟ್ಟದಲ್ಲಿ ಕಡಲತೀರಗಳನ್ನು ಗುರುತಿಸಲು ‘ಬ್ಲೂ ಫ್ಲ್ಯಾಗ್’ ಮನ್ನಣೆ ನೀಡುತ್ತದೆ. ಇದಕ್ಕಾಗಿ ಕಡಲತೀರದ ಸ್ವಚ್ಛತೆ, ನೀರಿನ ಗುಣಮಟ್ಟ, ಪರಿಸರಸ್ನೇಹಿ ನಿರ್ಮಾಣಗಳು ಸೇರಿದಂತೆ 33 ಷರತ್ತುಗಳನ್ನು ಚಾಚೂ ತಪ್ಪದೇ ಪಾಲಿಸಬೇಕಾಗುತ್ತದೆ.
ಕೇಂದ್ರ ಸರ್ಕಾರವು ರಾಜ್ಯದ ಕಾಸರಕೋಡು, ಪಡುಬಿದ್ರಿ, ಗುಜರಾತ್ನ ಶಿವರಾಜಪುರ, ಡಿಯುನ ಘೋಗ್ಲಾ, ಕೇರಳದ ಕಪ್ಪಾಡ್, ಆಂಧ್ರಪ್ರದೇಶದ ಋಷಿಕೊಂಡ, ಒಡಿಶಾದ ಗೋಲ್ಡನ್ ಮತ್ತು ಅಂಡಮಾನ್ ದ್ವೀಪದ ರಾಧಾನಗರ ಕಡಲತೀರಗಳು ಕಳೆದ ವರ್ಷ ಪ್ರಮಾಣ ಪತ್ರ ಪಡೆದಿದ್ದವು. ಈ ವರ್ಷ ತಮಿಳುನಾಡಿನ ಕೋವಲಂ ಹಾಗೂ ಪುದುಚೇರಿಯ ಈಡನ್ ಕಡಲತೀರಗಳಲ್ಲೂ ‘ಬ್ಲೂ ಫ್ಲ್ಯಾಗ್’ ಅನಾವರಣಗೊಂಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.