ಶಿರಸಿ: ‘ಅಡಿಕೆ ಬೆಳೆಗಾರರನ್ನು ಮಧ್ಯವರ್ತಿಗಳ ಕಪಿಮುಷ್ಠಿಯಿಂದ ಹೊರತಂದು ರೈತರು ಬೆಳೆದ ಬೆಳೆಗೆ ಯೋಗ್ಯ, ಸರಳ ಹಾಗೂ ಪಾರದರ್ಶಕ ವ್ಯವಹಾರಕ್ಕೆ ಅವಕಾಶ ಮಾಡಿಕೊಟ್ಟವರು ಶ್ರೀಪಾದ ಹೆಗಡೆ ಕಡವೆ’ ಎಂದು ನಿವೃತ್ತ ಪ್ರಾಚಾರ್ಯ ಕೆ.ಎನ್.ಹೊಸ್ಮನಿ ಹೇಳಿದರು.
ನಗರದ ಟಿಆರ್ಸಿ ಸಭಾ ಭವನದಲ್ಲಿ ಗುರುವಾರ ನಡೆದ ಸಹಕಾರಿ ಶ್ರೀಪಾದ ಹೆಗಡೆ ಕಡವೆ ಅವರ 30ನೇ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘ಸರಳ ಜೀವನ, ಉದಾತ್ತ ಚಿಂತನೆಯನ್ನು ಹೊಂದಿದ್ದ ಕಡವೆ ಅವರು ರೈತರ ಬದುಕಿಗೆ ಜೀವ ತುಂಬಿದವರು. ಜಿಲ್ಲೆಯ ಅನೇಕ ಸಹಕಾರ ಸಂಘ, ಸಂಸ್ಥೆಗಳು ಬೆಳಗಲು, ಅಭಿವೃದ್ದಿ ಹೊಂದಲು ಪ್ರಮುಖ ಕಾರಣರಾದವರು. ರೈತರ ಅನುಕೂಲತೆಗೆ ತಕ್ಕಂತೆ ಹಣಕಾಸಿನ ನೆರವು, ಬಡ್ಡಿ ರಿಯಾಯಿತಿ, ಬದ್ದತೆ ಪಾಠ ಮಾಡಿದವರು’ ಎಂದರು.
ಸಾಮಾಜಿಕ ಕಾರ್ಯಕರ್ತ ಕೆ.ಆರ್. ಹೆಗಡೆ ಕಾನಸೂರು ಮಾತನಾಡಿ, ‘ಸಚ್ಚಾರಿತ್ರ್ಯಕ್ಕೆ ಆದ್ಯತೆ ನೀಡಿದ್ದ ಕಡವೆ ಅವರು ಆಧ್ಯಾತ್ಮಿಕತೆಯ ಒಲವು ಹೊಂದಿದ್ದರು. ಮನೆಮನೆಗೆ ನಡೆದುಕೊಂಡೇ ಹೋಗುತ್ತಿದ್ದ ಸರಳ ವ್ಯಕ್ತಿತ್ವದವರಾಗಿದ್ದರು’ ಎಂದು ತಿಳಿಸಿದರು.
ಈ ವೇಳೆ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ರ್ಯಾಂಕ್ ಗಳಿಸಿದ ಟಿಆರ್ಸಿ ಸದಸ್ಯರ ಮಕ್ಕಳನ್ನು ಪುರಸ್ಕರಿಸಲಾಯಿತು.
ಟಿಆರ್ಸಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಎಂಇಎಸ್ ಕಾಲೇಜಿನ ನಿರ್ದೇಶಕ ಶ್ರೀಪಾದ ಹೆಗಡೆ ಕಡವೆ, ಜನ್ಮಶತಮಾನೋತ್ಸವ ಸಮಿತಿಯ ಸಂಚಾಲಕ ಎಸ್.ಕೆ. ಭಾಗ್ವತ ಶಿರಸಿಮಕ್ಕಿ, ಆರ್.ಎನ್.ಹೆಗಡೆ ಭಂಡೀಮನೆ, ಭಾಸ್ಕರ ಹೆಗಡೆ ಕಾಗೇರಿ ಇದ್ದರು.
ಟಿಆರ್ಸಿ ಸಿಬ್ಬಂದಿ ಪ್ರಶಾಂತಿ, ಸುಷ್ಮಾ, ಸ್ವಾತಿ ಪ್ರಾರ್ಥಿಸಿದರು. ಜಿ.ಜಿ.ಹೆಗಡೆ ಕುರವಣಿಗೆ ನಿರೂಪಿಸಿದರು. ಟಿಆರ್ಸಿ ನಿರ್ದೇಶಕ ವಿ.ಜಿ.ಹೆಗಡೆ ಸೋಮ್ನಳ್ಳಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.