ಕುಮಟಾ: ‘ಸಮಾಜ ಒಗ್ಗೂಡಿಸುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲ ಸಮಾಜದವರೂ ಕೈಜೋಡಿಸಿದಾಗ ಸಹೋದರತ್ವದ ಬಾಂಧವ್ಯ ವೃದ್ಧಿಯಾಗುತ್ತದೆ’ ಎಂದು ಕನ್ಯಾಡಿಯ ರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಮಹಾಕುಂಭಮೇಳದ ನಂತರ ಸಾಧು ಅಖಾಡದ ಮಹಾಮಂಡಲೇಶ್ವರ ಎನ್ನುವ ಕೀರ್ತಿಗೆ ಪಾತ್ರರಾಗಿ ಶ್ರೀಗಳು ಮೊದಲ ಬಾರಿಗೆ ಭಾನುವಾರ ಪಟ್ಟಣದ ನಾಮಧಾರಿ ಸಭಾ ಭವನಕ್ಕೆ ಆಗಮಿಸಿದಾಗ ನಾಮಧಾರಿ ಸಮಾಜದಿಂದ ನೀಡಿದ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
`ಈ ವರ್ಷ ತಾಲ್ಲೂಕಿನ ಕೋನಳ್ಳಿಯ ವನದುರ್ಗಾ ಸಭಾ ಭವನದಲ್ಲಿ ಚಾತುರ್ಮಾಸ್ಯ ನಡೆಸಲು ಎಲ್ಲರೂ ಸೇರಿ ನಿರ್ಧರಿಸಿರುವುದು ವಿಶೇಷ. ಇಂಥ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಸಹೋದರತ್ವ ಬೆಸೆಯುವ ಕಾರ್ಯವಾಗಬೇಕಾದರೆ ಎಲ್ಲ ಸಮಾಜದವರೂ ಒಳಗೊಳ್ಳುವಂತೆ ಕಾರ್ಯಕ್ರಮದ ಸಂಘಟಕರು ವ್ಯವಸ್ಥೆ ಕಲ್ಪಿಸಬೇಕು’ ಎಂದರು.
ನಂತರ ಶ್ರೀಗಳು ಕೋನಳ್ಳಿಯ ವನದುರ್ಗಾ ಸಭಾ ಭವನಕ್ಕೆ ತೆರಳಿ ಚಾರ್ತುರ್ಮಾಸ್ಯ ನಡೆಯುವ ಪರಿಸರ ವೀಕ್ಷಸಿ ಅಲ್ಲಿ ರಕ್ತ ಚಂದನ ಗಿಡ ನೆಟ್ಟು ಅದಕ್ಕೆ ನೀರುಣಿಸಿದರು. ವನದುರ್ಗಾ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಶ್ರೀಗಳನ್ನು ಸ್ವಾಗತಿಸಿ ಗೌರವ ಅರ್ಪಿಸಿದರು.
ಆರ್ಯ ಈಡಿಗ ಸಮಾಜದ ತಾಲ್ಲೂಕು ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಮುಖಂಡರಾದ ಎಚ್.ಆರ್. ನಾಯ್ಕ, ಆರ್.ಜಿ. ನಾಯ್ಕ, ಎಂ.ಎಲ್. ನಾಯ್ಕ, ಸೂರಜ ನಾಯ್ಕ, ಗಜು ನಾಯ್ಕ ಅಳ್ವೆಕೋಡಿ, ಪ್ರಮೋದ ನಾಯ್ಕ, ಪುರಸಭೆ ಮಾಜಿ ಅಧ್ಯಕ್ಷ ಪ್ರಶಾಂತ ನಾಯ್ಕ, ಕೊಂಕಣ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮುರಳೀಧರ ಪ್ರಭು, ಸತೀಶ ನಾಯ್ಕ ಶಿರಸಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ ಭಾಗ್ವತ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ವೈಭವ ನಾಯ್ಕ ಇದ್ದರು.
ತಾಲ್ಲೂಕು ಆರ್ಯ ಈಡಿಗ ನಾಮಧಾರಿ ಸಂಘ, ರಾಮಕ್ಷೇತ್ರ ಸೇವಾ ಸಮಿತಿ, ತಾಲ್ಲೂಕು ನಾಮಧಾರಿ ನೌಕರರ ಸಂಘ, ತಾಲ್ಲೂಕು ನಾಮಧಾರಿ ಮಹಿಳಾ ಸಂಘ, ತಾಲ್ಲೂಕು ಯುವ ನಾಮಧಾರಿ ಸಂಘಗಳ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.