ಶಿರಸಿ: ಎರಡು ವರ್ಷಕ್ಕೊಮ್ಮೆ ಅದ್ದೂರಿಯಾಗಿ ನಡೆಯುವ ಮಾರಿಕಾಂಬಾ ದೇವಿ ಜಾತ್ರೆ ವೇಳೆ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲು ಬೂಂದು ಲಡ್ಡುಗಳನ್ನು ಸಿದ್ಧಪಡಿಸಲಾಗುತ್ತಿದೆ.
ದೇವಸ್ಥಾನದ ಭೋಜನಾಲಯದಲ್ಲಿ ಕಳೆದ ಎರಡು ದಿನಗಳಿಂದ ಸ್ಥಳೀಯ ಪಾಕ ಪ್ರವೀಣರು ಲಡ್ಡು ತಯಾರಿಸಲು ಬೂಂದಿ ಕಾಳುಗಳನ್ನು ಸಿದ್ಧಪಡಿಸುತ್ತಿದ್ದಾರೆ. ಮಾ.15ರ ಒಳಗೆ 3 ಲಕ್ಷ ಲಡ್ಡುಗಳನ್ನು ತಯಾರಿಸುವ ಗುರಿ ಇಟ್ಟುಕೊಳ್ಳಲಾಗಿದೆ.
ದೇವಿಯ ದರ್ಶನದ ಬಳಿಕ ಭಕ್ತರು ಪ್ರಸಾದ ಚೀಟಿ ನೀಡಿ ಲಡ್ಡು ಪಡೆಯಲು ಅವಕಾಶವಿದೆ. ಒಂದು ಲಡ್ಡು ಪಡೆಯಲು ₹20 ಶುಲ್ಕ ನಿಗದಿಪಡಿಸಲಾಗಿದೆ. ಜಾತ್ರೆ ವೇಳೆ ಲಡ್ಡು ಪ್ರಸಾದಕ್ಕೆ ಬೇಡಿಕೆ ಹೆಚ್ಚಿರುವ ಕಾರಣ ಈ ಬಾರಿ ಕಳೆದ ವರ್ಷಕ್ಕಿಂತ ಒಂದು ಲಕ್ಷ ಹೆಚ್ಚುವರಿ ಲಡ್ಡು ಸಿದ್ಧಪಡಿಸಲಾಗುತ್ತಿದೆ.
‘ಸೀಮಿತ ಅವಧಿಯಲ್ಲಿ ಲಕ್ಷಾಂತರ ಲಡ್ಡು ತಯಾರಿಸಬೇಕಿದೆ. ಹೀಗಾಗಿ ನುರಿತ ಸಿಬ್ಬಂದಿ ಜತೆಗೆ ಯಂತ್ರಗಳನ್ನು ಬಳಸಿ ಲಡ್ಡು ಸಿದ್ಧಪಡಿಸುತ್ತೇವೆ’ ಎನ್ನುತ್ತಾರೆ ಲಡ್ಡು ತಯಾರಿ ಗುತ್ತಿಗೆ ಪಡೆದ ಗಣೇಶ ಹೆಗಡೆ ಗೌರಿಬಣ್ಣಿಗೆ.
‘ಮೂರು ಲಕ್ಷ ಲಡ್ಡು ಸಿದ್ಧಪಡಿಸಿಟ್ಟುಕೊಳ್ಳಲು ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಇನ್ನಷ್ಟು ಸಿದ್ಧಪಡಿಸಲಾಗುವುದು. ಜಾತ್ರೆಗೆ ಬರುವ ಭಕ್ತರ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಸಾಮಗ್ರಿಗಳನ್ನು ಮುಂಚಿತವಾಗಿ ಸಿದ್ಧವಿಟ್ಟುಕೊಂಡಿದ್ದೇವೆ’ ಎಂದು ಮಾರಿಕಾಂಬಾ ದೇವಾಲಯದ ವ್ಯವಸ್ಥಾಪಕ ಚಂದ್ರಕಾಂತ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.