ಕುಮಟಾ: ತಾಲ್ಲೂಕಿನ ಅಳಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬರಿಗೆ ಬಳಿ ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ ಬದಿ ಗುಡ್ಡ ಕುಸಿದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.
ಹೆದ್ದಾರಿ ಅಂಚಿಗೆ ತಡೆಗೋಡೆ ನಿರ್ಮಿಸಿದ್ದರಿಂದ ಕುಸಿದ ಹೆಚ್ಚಿನ ಪ್ರಮಾಣದ ಮಣ್ಣು ತಡೆಗೋಡೆ ಒಳಬದಿಗೆ ಬಿದ್ದಿದೆ. ತಡೆಗೋಡೆ ಇಲ್ಲದಿದ್ದರೆ ರಸ್ತೆ ಮೇಲೆ ಮಣ್ಣು ಬಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು ಎಂದು ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಕೃಷ್ಣ ಕಾಮಕರ್ ತಿಳಿಸಿದ್ದಾರೆ.
‘ಗುಡ್ಡದ ಮೇಲೆ ಇರುವ ದೊಡ್ಡ ಬಂಡೆಗಲ್ಲನ್ನು ಹೆದ್ದಾರಿ ನಿರ್ಮಾಣ ಕಂಪನಿ ಮೊದಲೇ ಸಿಡಿಮದ್ದು ಬಳಸಿ ಚೂರು ಮಾಡಿದ್ದರಿಂದ ಸಣ್ಣ ಕಲ್ಲುಗಳು ತಡೆಗೋಡೆಯೊಳಗೆ ಬೀಳಬಹುದು. ಗುಡ್ಡ ಕುಸಿತ ಉಂಟಾದ ಜಾಗದ ಪಕ್ಕದಲ್ಲಿ ಉರುಳಿ ಬೀಳುವ ಸ್ಥಿತಿಯಲ್ಲಿದ್ದ ಮರವನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.
ಮರ ಬಿದ್ದು ಮನೆಗೆ ಹಾನಿ: ತಾಲ್ಲೂಕಿನ ಅಂತ್ರವಳ್ಳಿ ಗ್ರಾಮದ ಕುಡ್ಲೆ ಬಳಿ ಶ್ಯಾಮಲಾ ರೇವಣಕರ್ ಎನ್ನುವವರ ಮನೆಯ ಮೇಲೆ ಮರ ಬಿದ್ದು ಸುಮಾರು ₹ 15 ಸಾವಿರ ಹಾನಿ ಸಂಭವಿಸಿದೆ. ತಾಲ್ಲೂಕಿನ ಕಲಕೇರಿ ಗ್ರಾಮದ ಸುಬ್ರಹ್ಮಣ್ಯ ಅವರ ಮನೆಯ ಚಾವಣಿ ಮಳೆಗೆ ಕುಸಿದು ಹಾನಿ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.