ಶಿರಸಿ: ತಾಲ್ಲೂಕಿನ ಸೋಂದಾದಲ್ಲಿ ಮೇ 4 ಮತ್ತು 5ರಂದು ನಡೆಯಲಿರುವ ಐದನೇ ವರ್ಷದ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನ ಮತ್ತು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನದ ಪ್ರಯುಕ್ತ ಗುರುವಾರ ಇತಿಹಾಸ ಜ್ಯೋತಿ ಬೆಳಗಲಾಯಿತು.
ಜಾಗೃತ ವೇದಿಕೆಯು ಸ್ವರ್ಣವಲ್ಲಿ ಮಠ, ವಾದಿರಾಜ ಮಠ ಹಾಗೂ ಜೈನಮಠಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಸಮ್ಮೇಳನದ ಜ್ಯೋತಿಗೆ ವಾದಿರಾಜ ಮಠದಲ್ಲಿ ಚಾಲನೆ ನೀಡಲಾಯಿತು. ಅಲ್ಲಿಂದ ಹೊರಟ ಜ್ಯೋತಿಯು ಜೈನಮಠ, ಸ್ವರ್ಣವಲ್ಲಿ ಮಠಕ್ಕೆ ಬಂದು ನಂತರ ಎಂಟು ತಂಡಗಳಲ್ಲಿ ಹೊರಟು, ಸೋಂದಾ ಸುತ್ತಮುತ್ತಲಿನ ಪ್ರತಿ ಮನೆಯಲ್ಲೂ ಹಣತೆಯಲ್ಲಿ ಜ್ಯೋತಿ ಬೆಳಗಿ, ಇತಿಹಾಸ ಸಮ್ಮೇಳನಕ್ಕೆ ಆಹ್ವಾನ ನೀಡಲಾಯಿತು.
ವಾದಿರಾಜ ಮಠದ ಆಡಳಿತಾಧಿಕಾರಿ ರಾಧಾರಮಣ ಉಪಾಧ್ಯಾಯ, ಜೈನ ಮಠದ ಅಧ್ಯಕ್ಷ ಚಂದ್ರರಾಜ ಜೈನ, ಜಾಗೃತ ವೇದಿಕೆ ಅಧ್ಯಕ್ಷ ಎನ್.ಎನ್.ಹೆಗಡೆ ವಾಜಗದ್ದೆ, ಸಮ್ಮೇಳನದ ಸಂಚಾಲಕ ಲಕ್ಷ್ಮೀಶ ಸೋಂದಾ, ಪ್ರಮುಖರಾದ ರತ್ನಾಕರ ಹೆಗಡೆ ಬಾಡಲಕೊಪ್ಪ, ಶ್ರೀಪಾದ ಹೆಗಡೆ ಹೊಸ್ತೋಟ, ಎನ್.ಎನ್.ಹೆಗಡೆ ಕಲಗದ್ದೆ, ಶಾಂತಾರಾಮ ಹೆಗಡೆ, ರಮೇಶ ಶಾಸ್ತ್ರಿ, ಶ್ರೀಧರ ಹೆಗಡೆ, ಸತ್ಯನಾರಾಯಣ ಹೆಗಡೆ, ಮಹಾಬಲೇಶ್ವರ ಹೆಗಡೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.