ಜೊಯಿಡಾ: ತಾಲ್ಲೂಕಿನ ಅಣಶಿ ಘಟ್ಟದ ರಾಜ್ಯ ಹೆದ್ದಾರಿಯ ತಿರುವಿನಲ್ಲಿ, ಸರಕು ಸಾಗಣೆಯ ಲಾರಿಯೊಂದು ಕೆಟ್ಟು ನಿಂತ ಕಾರಣ ವಾಹನಗಳ ಸಂಚಾರಕ್ಕೆ ಭಾರಿ ಅಡಚಣೆಯಾಗಿದೆ. ಕಾರವಾರ- ಜೊಯಿಡಾ ನಡುವೆ ಬಸ್ಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತವಾಗಿದೆ.
ಜೊಯಿಡಾ ಕಡೆಯಿಂದ ಕಾರವಾರದತ್ತ ಬರುತ್ತಿದ್ದ ಲಾರಿಯು, ಕದ್ರಾದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಮಂಗಳವಾರ ರಾತ್ರಿ ಎಂಟು ಗಂಟೆಯ ಸುಮಾರಿಗೆ ತಿರುವಿನಲ್ಲಿ ಅಡ್ಡಲಾಗಿ ನಿಂತಿದೆ. ಬುಧವಾರ ಬೆಳಿಗ್ಗೆ ಕಾರವಾರದಿಂದ ಬೆಳಗಾವಿ, ದಾಂಡೇಲಿ ಮುಂತಾದೆಡೆಗೆ ಹೊರಟ ಬಸ್ಗಳು ಮುಂದೆ ಸಾಗಲಾಗದೇ ಹಿಂದಿರುಗಿವೆ. ಕೆಲವು ವಾಹನಗಳು ಕಾರವಾರ- ಅಂಕೋಲಾ- ಯಲ್ಲಾಪುರ ಮೂಲಕ ಸಾಗಿವೆ.
ಸಣ್ಣ ಕಾರುಗಳು, ದ್ವಿಚಕ್ರ ವಾಹನಗಳು ಮಾತ್ರ ಸಾಗಲು ಸಾಧ್ಯವಾಗುವಷ್ಟು ಕಿರಿದಾಗಿ ಜಾಗವಿದ್ದು, ಕೆಲವರು ಅದರಲ್ಲೇ ವಾಹನಗಳನ್ನು ಸಾಗಿಸಿದ್ದಾರೆ. ಲಾರಿಯ ತೆರವಿಗೆ ಕಾರವಾರದಿಂದ ಕ್ರೇನ್ ತರಿಸಲಾಗುತ್ತಿದೆ. ಅಲ್ಲಿಯ ತನಕ ವಾಹನಗಳ ಸಂಚಾರಕ್ಕೆ ಅಡಚಣೆ ಮುಂದುವರಿಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.