ಮಂಗಳೂರು: ಇಲ್ಲಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹೋರಾಟಗಾರ್ತಿ ಸುಕ್ರಿ ಬೊಮ್ಮ ಗೌಡ, ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿ, ಊರಿಗೆ ತೆರಳಿದರು.
ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಅವರನ್ನು ಕಳೆದ ಶನಿವಾರ ಅಂಕೋಲಾದಿಂದ ಮಂಗಳೂರಿಗೆ ಕರೆತಂದು, ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯದಲ್ಲಿ ತೊಂದರೆ ಗಮನಿಸಿದ ವೈದ್ಯರು, ನಾಲ್ಕು ಸ್ಟಂಟ್ಗಳನ್ನು ಅಳವಡಿಸಿದ್ದರು. ಚಿಕಿತ್ಸೆಗೆ ಬಹುಬೇಗ ಸ್ಪಂದಿಸಿದ 84 ವರ್ಷದ ಸುಕ್ರಜ್ಜಿ ಅವರನ್ನು ಎರಡು ದಿನಗಳ ಹಿಂದೆ ಸಾಮಾನ್ಯ ವಾರ್ಡ್ಗೆ ಸ್ಥಳಾಂತರಿಸಲಾಗಿತ್ತು.
‘ಕೆಎಂಸಿ ಆಸ್ಪತ್ರೆಯಲ್ಲಿ ಆರು ದಿನ ಅಲ್ಲಿನ ವೈದ್ಯರಾದ ಡಾ. ನರಸಿಂಹ ಪೈ, ಡಾ. ಪದ್ಮನಾಭ ಕಾಮತ್, ಡಾ. ರಾಕೇಶ್ ಒಳಗೊಂಡ ತಂಡದವರು ಸುಕ್ರಜ್ಜಿ ಆರೋಗ್ಯದ ಬಗ್ಗೆ ತುಂಬಾ ಕಾಳಜಿವಹಿಸಿದ್ದರು. ಅಜ್ಜಿ ಈಗ ಹಿಂದಿನ ಉತ್ಸಾಹ, ಲವಲವಿಕೆಗೆ ಮರಳಿದ್ದಾರೆ. ಮೂಲತ್ವ ಫೌಂಡೇಶನ್ನ ಪ್ರಕಾಶ್ ಕೋಟ್ಯಾನ್, ಕಲ್ಪನಾ ಕೋಟ್ಯಾನ್ ಅವರು ತಮ್ಮದೇ ಕಾರಿನಲ್ಲಿ ಸುಕ್ರಜ್ಜಿಯನ್ನು ಅಂಕೋಲಾಕ್ಕೆ ಕರೆದುಕೊಂಡು ಹೋಗಿ, ಸಹಕರಿಸಿದರು’ ಎಂದು ಸುಕ್ರಜ್ಜಿ ಚಿಕಿತ್ಸೆಗೆ ಬಗ್ಗೆ ವಿಶೇಷ ನಿಗಾವಹಿಸುತ್ತಿದ್ದ ಇಲ್ಲಿನ ಸಾಮಾಜಿಕ ಕಾರ್ಯಕರ್ತ ದಿನೇಶ್ ಹೊಳ್ಳ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.