ADVERTISEMENT

ಮಾಣಿಹೊಳೆ ದಾಟಲು ಸೇತುವೆ: ಅಂತಿಮ ಹಂತದಲ್ಲಿ ಕಾಮಗಾರಿ

ಸಿದ್ದಾಪುರ: ಈ ಮಳೆಗಾಲದಲ್ಲಾದರೂ ವ್ಯವಸ್ಥೆಯಾಗುವ ನಿರೀಕ್ಷೆ

ರವೀಂದ್ರ ಭಟ್ಟ, ಬಳಗುಳಿ
Published 7 ಮೇ 2019, 19:45 IST
Last Updated 7 ಮೇ 2019, 19:45 IST
ಸಿದ್ದಾಪುರ ತಾಲ್ಲೂಕಿನ ಮಾಣಿ ಹೊಳೆಗೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ
ಸಿದ್ದಾಪುರ ತಾಲ್ಲೂಕಿನ ಮಾಣಿ ಹೊಳೆಗೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ   

ಸಿದ್ದಾಪುರ:ತಾಲ್ಲೂಕಿನ ಮಾಣಿಹೊಳೆ ಸೇತುವೆ ಕಾಮಗಾರಿ ಮುಕ್ತಾಯದ ಹಂತ ತಲುಪಿದೆ. ನೂತನ ಸೇತುವೆಯನ್ನು ಇದೇ ಮಳೆಗಾಲದಲ್ಲಿ ಸಂಚಾರಕ್ಕೆ ಮುಕ್ತಗೊಳಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

‘ಕೇಂದ್ರ ಸರ್ಕಾರದ ರಸ್ತೆ ನಿಧಿಯ ಅನುದಾನದಿಂದ ಈ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ.ಕಾಮಗಾರಿಯ ಅಂದಾಜು ವೆಚ್ಚ ₹ 15 ಕೋಟಿ ಹಾಗೂ ಟೆಂಡರ್ ಮೊತ್ತ₹ 13.30 ಕೋಟಿ. 2017ರ ಡಿಸೆಂಬರ್ ತಿಂಗಳಿನಲ್ಲಿ ಟೆಂಡರ್ ಆಗಿರುವ ಈ ಕಾಮಗಾರಿಯು, 2018 ಮಾರ್ಚ್‌ನಲ್ಲಿ ಆರಂಭಗೊಂಡಿತು. ಈಗಾಗಲೇ ಸೇತುವೆಯ ಮೂರು ಸ್ಪಾನ್‌ಗಳ ನಿರ್ಮಾಣ ಮುಗಿದಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಸಹಾಯಕ ಎಂಜಿನಿಯರ್ ಮಹೇಶ ನಾಯ್ಕ ಹೇಳಿದರು.

‘ಮಾಣಿಹೊಳೆ ಸೇತುವೆಯ ನಾಲ್ಕನೇ ಸ್ಪಾನ್‌ಗೆ ಸ್ಲ್ಯಾಬ್ ಹಾಕುವ ಕೆಲಸವನ್ನು ಮೇ 15ರ ಹೊತ್ತಿಗೆ ಕೈಗೊಳ್ಳುತ್ತೇವೆ. ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವುದಕ್ಕೆ ಎಲ್ಲ ಪ್ರಯತ್ನ ಮಾಡುತ್ತೇವೆ’ ಎಂದು ಅವರು ತಿಳಿಸಿದರು.

ADVERTISEMENT

‘ಈ ಕಾಮಗಾರಿ ಇಷ್ಟರಲ್ಲಿಯೇ ಮುಗಿಯಬೇಕಾಗಿತ್ತು. ಇದು ದೊಡ್ಡ ಕಾಮಗಾರಿಆಗಿರುವುದರಿಂದ ಮತ್ತು ಮರಳಿನ ಸಮಸ್ಯೆಯ ಕಾರಣ ವಿಳಂಬವಾಗಿದೆ. ಸೇತುವೆಯ ಎರಡೂ ಕಡೆಗಳಲ್ಲಿ 2.5 ಕಿ.ಮೀ ಸಂಪರ್ಕ ರಸ್ತೆಇರಲಿದೆ. ಸದ್ಯ ಒಂದು ಕಡೆ 150 ಮೀಟರ್ ಹಾಗೂ ಮತ್ತೊಂದು ಕಡೆ 80 ಮೀಟರ್ ಮಣ್ಣು ಹಾಕಿ ರಸ್ತೆಯನ್ನು ಎತ್ತರಗೊಳಿಸುತ್ತಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾತ್ಕಾಲಿಕ ರಸ್ತೆ:ಹಳೆಯ ಸೇತುವೆ ಕುಸಿದಿದ್ದರಿಂದ ಮಳೆಗಾಲದಲ್ಲಿ ಮಾಣಿಹೊಳೆಯ ಸ್ಥಳದಲ್ಲಿ ರಸ್ತೆ ದಾಟುವುದು ಸಾಧ್ಯವೇ ಇರಲಿಲ್ಲ. ಬೇಸಿಗೆಯಲ್ಲಿ ಈ ಸೇತುವೆಯ ಪಕ್ಕದಲ್ಲಿಯೇ ಹೊಳೆಯಲ್ಲಿ ಪೈಪ್ ಜೋಡಿಸಿ, ತಾತ್ಕಾಲಿಕ ರಸ್ತೆಯನ್ನು ಮಾಡಿಕೊಡಲಾಗಿತ್ತು. ಆ ತಾತ್ಕಾಲಿಕ ರಸ್ತೆಗೆ ಹಾಕಿದ್ದ ಪೈಪ್‌ಗಳನ್ನು ಜೂನ್ ಮೊದಲ ವಾರದಲ್ಲಿ ತೆಗೆಯಲಾಗುತ್ತಿತ್ತು.

2014ರಲ್ಲಿ ಕುಸಿದಸೇತುವೆ

ತಾಲ್ಲೂಕಿನ ಐದು ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಜನರು, ಸಿದ್ದಾಪುರ ಪಟ್ಟಣಕ್ಕೆ ಮಾಣಿ ಹೊಳೆ ಸೇತುವೆ ಪ್ರಮುಖ ಕೊಂಡಿಯಾಗಿತ್ತು. 2014ರ ಅ.30ರಂದು ಸೇತುವೆ ಕುಸಿದಬಳಿಕವಾಹನ ಹಾಗೂ ಜನರ ಸಂಚಾರವನ್ನು ಸ್ಥಗಿತಗೊಳಿಸಲಾಯಿತು.ಇದರಿಂದ ಈ ಭಾಗದ ಜನರು ಹಾರ್ಸಿಕಟ್ಟಾ– ಮುಠ್ಠಳ್ಳಿ– ಹಾಲ್ಕಣಿ– ಯಲೂಗಾರ್ ಕ್ರಾಸ್– ನೆಲೆಮಾವು ಕ್ರಾಸ್– ಗೋಳಿಮಕ್ಕಿ ಮಾರ್ಗದಲ್ಲಿ ಸಂಚರಿಸಬೇಕಾಗಿತ್ತು.

ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಂಘಟನೆಗಳಿಂದ ಪ್ರತಿಭಟನೆಗಳೂ ನಡೆದವು. ಕೊನೆಗೂ ಕೇಂದ್ರ ಸರ್ಕಾರದ ರಸ್ತೆ ನಿಧಿಯಿಂದ ಅನುದಾನ ಮಂಜೂರಾಗಿ ಕಾಮಗಾರಿ ಆರಂಭಗೊಂಡಿತು.

ಸೇತುವೆಯ ಅಂಕಿ ಅಂಶ

72 ಮೀಟರ್ಸೇತುವೆಯ ಉದ್ದ

18 ಮೀಟರ್ನಾಲ್ಕು ಕಂಬಗಳ ನಡುವಿನಅಂತರ

16 ಮೀಟರ್ಸೇತುವೆಯ ಒಟ್ಟು ಅಗಲ

11 ಮೀಟರ್ರಸ್ತೆಗೆ ಮೀಸಲಾದ ಜಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.