ADVERTISEMENT

ಮೀನು ಮಾರುಕಟ್ಟೆ ಮರು ಹರಾಜು ಗದ್ದಲ

ಕಾರವಾರ ನಗರಸಭೆ ಸಾಮಾನ್ಯ ಸಭೆ: ಆಡಳಿತ, ವಿರೋಧ ಪಕ್ಷದವರ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 14:22 IST
Last Updated 24 ಸೆಪ್ಟೆಂಬರ್ 2021, 14:22 IST
ಕಾರವಾರದಲ್ಲಿ ಶುಕ್ರವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಡಾ.ನಿತಿನ್ ಪಿಕಳೆ ಮಾತನಾಡಿದರು. ಆಯುಕ್ತ ಆರ್.ಪಿ.ನಾಯ್ಕ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಂಧ್ಯಾ ಬಾಡ್ಕರ್ ಇದ್ದಾರೆ
ಕಾರವಾರದಲ್ಲಿ ಶುಕ್ರವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಡಾ.ನಿತಿನ್ ಪಿಕಳೆ ಮಾತನಾಡಿದರು. ಆಯುಕ್ತ ಆರ್.ಪಿ.ನಾಯ್ಕ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಂಧ್ಯಾ ಬಾಡ್ಕರ್ ಇದ್ದಾರೆ   

ಕಾರವಾರ: ನಗರದ ಮೀನು ಮಾರುಕಟ್ಟೆಯ ಮಳಿಗೆಗಳ ಮರು ಹರಾಜು ಮಾಡಬೇಕು ಎಂಬ ವಿಚಾರವು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮತ್ತೆ ಚರ್ಚೆಗೀಡಾಯಿತು. ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ, ಕಡಿಮೆ ಬಾಡಿಗೆಗೆ ಹರಾಜು ಹಾಕಿದ್ದರಿಂದ ನಗರಸಭೆಗೆ ನಷ್ಟವಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದರು. ಈಗಾಗಲೇ ನಗರಸಭೆಗೆ ಆದಾಯ ಬರುತ್ತಿದೆ. ಹಾಗಾಗಿ ಮರು ಹರಾಜು ಸಾಧ್ಯವಿಲ್ಲ ಎಂಬುದು ನಗರಸಭೆ ಆಡಳಿತ ಮಂಡಳಿಯ ಪ್ರತಿಕ್ರಿಯೆಯಾಗಿತ್ತು.

ವಿಷಯ ಪ್ರಸ್ತಾಪಿಸಿದ ಸದಸ್ಯ ಸಂದೀಪ ತಳೇಕರ್, ‘ಮಾರುಕಟ್ಟೆ ಮರು ಹರಾಜು ಬಗ್ಗೆ ಹಿಂದಿನ ಸಭೆಗಳಲ್ಲೂ ಸ್ಪಷ್ಟನೆ ಕೇಳಲಾಗಿತ್ತು. ಅವುಗಳನ್ನು ಮರುಹರಾಜು ಮಾಡಬೇಕು’ ಎಂದರು.

ADVERTISEMENT

ಮತ್ತೊಬ್ಬ ಸದಸ್ಯ ಮೋಹನ ನಾಯ್ಕ, ‘ಮೀನು ಮಾರುಕಟ್ಟೆ ವಿಚಾರದಲ್ಲಿ ಭ್ರಷ್ಟಾಚಾರವಾಗಿದೆ. ಪುನಃ ಹರಾಜು ಹಾಕಿದರೆ ಈಗಿನ ದರಕ್ಕಿಂತ ಎರಡಷ್ಟು ಆದಾಯ ಬರುತ್ತದೆ’ ಎಂದು ಪ್ರತಿಪಾದಿಸಿದರು. ಈ ವಿಚಾರದಲ್ಲಿ ಅವರು ಮತ್ತು ಸದಸ್ಯ ಪ್ರೇಮಾನಂದ ಗುನಗಾ ನಡುವೆ ತೀವ್ರ ಮಾತಿನ ಚಕಮಕಿಯೂ ನಡೆಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಡಾ.ನಿತಿನ್ ಪಿಕಳೆ, ‘ಮಾರುಕಟ್ಟೆ ನಿರ್ಮಾಣವಾಗಿ ಒಂದು ವರ್ಷವೇ ಕಳೆಯಿತು. ಪ್ರತಿ ಸಭೆಯಲ್ಲೂ ಇದೇ ವಿಷಯ ಪ್ರಸ್ತಾಪ ಮಾಡ್ತಿದ್ದೀರಿ’ ಎಂದು ಆಕ್ಷೇಪಿಸಿದರು. ಇದಕ್ಕೆ ಪ್ರತಿಯಾಗಿ ಸಂದೀಪ ತಳೇಕರ್, ‘ನಗರಸಭೆಯಲ್ಲಿ ಎಲ್ಲ ಕೆಲಸಗಳನ್ನು ಗಪ್‌ಚುಪ್ ಆಗಿ ಮಾಡುತ್ತಿದ್ದೀರಿ. ಸದಸ್ಯರಿಗೆ ಮಾಹಿತಿ ಕೊಡುತ್ತಿಲ್ಲ’ ಎಂದು ಆರೋಪಿಸಿದರು.

ಗದ್ದಲದ ನಡುವೆ ಮಾತನಾಡಿದ ನಗರಸಭೆ ಆಯುಕ್ತ ಆರ್.ಪಿ.ನಾಯ್ಕ, ‘ಈ ಕುರಿತು ಪರಿಶೀಲನೆ ನಡೆಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ’ ಎಂದರು.

‘ನಗರದ ಟ್ಯಾಗೋರ್ ಕಡಲತೀರದ ಸ್ವಚ್ಛತೆಗೆ ₹ 21.35 ಲಕ್ಷ ವೆಚ್ಚದಲ್ಲಿ ಟ್ರ್ಯಾಕ್ಟರ್, ಟ್ರೇಲರ್ ಖರೀದಿಸಲಾಗುತ್ತಿದೆ. ಕಡಲತೀರದ ನಿರ್ವಹಣೆಗೆ ಸಮಿತಿಯಿದೆ. ಇಲ್ಲಿ ನಡೆಯುವ ವಿವಿಧ ಚಟುವಟಿಕೆಗಳಿಂದ ಬರುವ ಆದಾಯವನ್ನು ಸಮಿತಿ ಪಡೆಯುತ್ತಿದೆ. ಹಾಗಿರುವಾಗ ನಗರಸಭೆ ಯಾಕೆ ಖರ್ಚು ಮಾಡಬೇಕು’ ಎಂದು ಪ್ರಶ್ನಿಸಿದರು.

ಇದಕ್ಕೆ ದನಿಗೂಡಿಸಿದ ಸದಸ್ಯ ಗಣಪತಿ ನಾಯ್ಕ, ‘ನಗರಸಭೆಗೆ ಖರ್ಚು ಜಾಸ್ತಿಯಾಗಲಿದೆ. ಸಮಿತಿ ರಚನೆಗೂ ಮೊದಲು ಇದ್ದಂತೆ ಆದಾಯವು ನಗರಸಭೆಗೆ ಸಲ್ಲುವಂತೆ ಮಾಡಬೇಕು’ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಆರ್.ಪಿ.ನಾಯ್ಕ, ‘ಕಡಲತೀರವನ್ನು ನಗರಸಭೆಗೆ ಕೊಡುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ. ಕಡಲತೀರ ಸ್ವಚ್ಛಗೊಳಿಸುವ ಯಂತ್ರವು ಎರಡು ವರ್ಷಗಳಿಂದ ನಿಂತಿದೆ. ಅದರ ದುರಸ್ತಿಗೆ ಮೆಕ್ಯಾನಿಕ್ ಮುಂಬೈನಿಂದ ಬರಬೇಕು. ಅದನ್ನು ದುರಸ್ತಿ ಮಾಡಿ ಅ.2 ಅಥವಾ 3ರ ಬಳಿಕ ಸ್ವಚ್ಛತೆ ಆರಂಭಿಸಲಾಗುವುದು’ ಎಂದರು.

ಮರ ಕಡಿಯಲು ₹ 35 ಸಾವಿರ!:

‘ಸುಂಕೇರಿಯ ಬಸ್ ನಿಲ್ದಾಣದ ಬಳಿ ಮರವೊಂದನ್ನು ಕಡಿದು ಹಾಕಲು ₹ 35 ಸಾವಿರ ನಿಗದಿ ಮಾಡಲಾಗಿದೆ. ಅಷ್ಟೊಂದು ಅಗತ್ಯವಿದೆಯೇ’ ಎಂದು ಸಂದೀಪ ತಳೇಕರ್ ಪ್ರಶ್ನಿಸಿದರು. ಗಣಪತಿ ನಾಯ್ಕ ಮಾತನಾಡಿ, ‘ಉಳಿದ ಕೆಲವೆಡೆಯೂ ಮರ ಕಡಿಯಲು ₹ 35 ಸಾವಿರ ನಿಗದಿ ಮಾಡಲಾಗಿದೆ. ಅದೇನು ಅದೃಷ್ಟ ಸಂಖ್ಯೆಯೇ’ ಎಂದು ಕೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಆರ್.ಪಿ.ನಾಯ್ಕ, ‘ಅದು ಬೃಹತ್ ಮರವಾಗಿದ್ದು, ಅಪಾಯಕಾರಿಯಾಗಿದೆ. ನಗರದಲ್ಲಿ ಮರಗಳನ್ನು ಕತ್ತರಿಸಲು ನಗರಸಭೆಯು ಪ್ರತಿವರ್ಷವೂ ₹ 10 ಲಕ್ಷದಿಂದ ₹ 15 ಲಕ್ಷ ಖರ್ಚು ಮಾಡುತ್ತಿದೆ. ಅರಣ್ಯ ಇಲಾಖೆ, ಹೆಸ್ಕಾಂ ಕೂಡ ಕ್ರಮ ಕೈಗೊಳ್ಳಬೇಕು’ ಎಂದರು.

ಉಪಾಧ್ಯಕ್ಷ ಪ್ರಕಾಶ ಪಿ.ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಂಧ್ಯಾ ಬಾಡ್ಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.