ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಇಲ್ಲಿನ ನಾವು-ನೀವು ಬಳಗವು ವಿವಿಧ ಸಂಘಟನೆಗಳೊಡಗೂಡಿ ‘ಸ್ವರ- ಲಯ’ ಜುಗಲ್ ಬಂದಿ ಕಾರ್ಯಕ್ರಮವನ್ನು ಅ.20ರ ಸಂಜೆ 6 ಗಂಟೆಗೆ ಇಲ್ಲಿನ ಸಾಮ್ರಾಟ್ ವಿನಾಯಕ ಸಭಾಭವನದಲ್ಲಿ ಹಮ್ಮಿಕೊಂಡಿದೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಳಗದ ಪ್ರಮುಖ ಎಸ್.ಕೆ.ಭಾಗವತ ಅವರು, ‘ಸಾಂಸ್ಕೃತಿಕ ನೆಲವಾದ ಶಿರಸಿಯಲ್ಲಿ ಕಲೆಗಳನ್ನು ಪೋಷಿಸುವ ದೃಷ್ಟಿಯಿಂದ ಅನೇಕ ಸಂಘಟನೆಗಳು ಒಂದಾಗಿ ಕೆಲಸ ಮಾಡುತ್ತಿವೆ. ಈ ಬಾರಿಯ ಕಾರ್ಯಕ್ರಮದಲ್ಲಿ ವಿನಾಯಕ ಹೆಗಡೆ ಮುತ್ಮುರ್ಡು ಗಾಯನ ಹಾಗೂ ಪ್ರಕಾಶ ಹೆಗಡೆ ಕಲ್ಲಾರೆಮನೆ ಕೊಳಲುವಾದನದ ಜುಗಲ್ಬಂದಿ ನಡೆಯಲಿದೆ. ತಬಲಾದಲ್ಲಿ ಲಕ್ಷ್ಮೀಶರಾವ್ ಕಲ್ಗುಂಡಿಕೊಪ್ಪ, ಡಾ.ಉದಯರಾಜ್ ಕರ್ಪೂರ್, ಹಾರ್ಮೋನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ್ ಸಹಕಾರ ನೀಡುವರು’ ಎಂದರು.
ಇದಕ್ಕೂ ಪೂರ್ವದಲ್ಲಿ ಡಾ.ವಿನಾಯಕ ಸುಬ್ರಹ್ಮಣ್ಯಂ, ಅವರ ಪುತ್ರಿ ವೈಷ್ಣವಿ ವಿನಾಯಕ ಅವರಿಂದ ಬಾನ್ಸುರಿ ವಾದನ ಪ್ರಸ್ತುತಗೊಳ್ಳಲಿದೆ. ಅವರಿಗೆ ನಾಗಪತಿ ಹೆಗಡೆ ಕಾಗೇರಿ ತಬಲಾ ಸಾಥ್ ನೀಡುವರು. ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಸುಷಿರ ಸಂಗೀತ ಪರಿವಾರ, ಸ್ವರಶ್ರೀ ಸಂಘಟನೆಗಳು ಸಹಕಾರ ನೀಡಿವೆ ಎಂದು ವಿ.ಪಿ.ಹೆಗಡೆ ವೈಶಾಲಿ ಹೇಳಿದರು. ಎಲ್.ಎಂ.ಹೆಗಡೆ, ಸತೀಶ ಹೆಗಡೆ ಗೋಳಿಕೊಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.