ADVERTISEMENT

ಲಕ್ಷ್ಮೀನರಸಿಂಹ ರಥ ಕಟ್ಟುವ ಹಸನ್

ಸೌಹಾರ್ದತೆಯ ಪ್ರತೀಕ ಸೋಂದಾ ಸ್ವರ್ಣವಲ್ಲಿ ರಥ

ಗಣಪತಿ ಹೆಗಡೆ
Published 12 ಮೇ 2022, 15:33 IST
Last Updated 12 ಮೇ 2022, 15:33 IST
ಶಿರಸಿ ತಾಲ್ಲೂಕಿನ ಸ್ವರ್ಣವಲ್ಲಿ ಮಠದ ರಥವನ್ನು ಮುಸ್ಲಿಂ ಸಮುದಾಯದವರು ಸಿಂಗರಿಸುತ್ತಿರುವುದು
ಶಿರಸಿ ತಾಲ್ಲೂಕಿನ ಸ್ವರ್ಣವಲ್ಲಿ ಮಠದ ರಥವನ್ನು ಮುಸ್ಲಿಂ ಸಮುದಾಯದವರು ಸಿಂಗರಿಸುತ್ತಿರುವುದು   

ಶಿರಸಿ: ಆಜಾನ್, ಹಿಜಾಬ್, ಹಲಾಲ್ ಹೀಗೆ ಸಾಲು ಸಾಲು ವಿವಾದಗಳು ಉದ್ಭವಿಸುತ್ತಿರುವ ಹೊತ್ತಲ್ಲೂ ಹಲವೆಡೆ ಧಾರ್ಮಿಕ ಸಾಮರಸ್ಯ ಕದಡದೆ ಗಟ್ಟಿಯಾಗಿ ನಿಂತಿದೆ. ಇದಕ್ಕೆ ತಾಲ್ಲೂಕಿನ ಸ್ವರ್ಣವಲ್ಲಿ ಮಠವೂ ಉದಾಹರಣೆ.

ಪ್ರತಿ ವರ್ಷ ಲಕ್ಷ್ಮೀನರಸಿಂಹ ಜಯಂತಿ ದಿನದಂದು ಇಲ್ಲಿ ರಥೋತ್ಸವ ನಡೆಯುತ್ತದೆ. ಈ ದಿನವನ್ನು ಕೃಷಿ ಜಯಂತಿ ಎಂದೂ ಆಚರಿಸಲಾಗುತ್ತಿದೆ. ಮೇ 14 ಕ್ಕೆ ಈ ಬಾರಿ ರಥೋತ್ಸವ ನಡೆಯಲಿದ್ದು, ಲಕ್ಷ್ಮೀನರಸಿಂಹ ದೇವರು ಪ್ರತಿಷ್ಠಾಪನೆಗೊಳ್ಳುವ ರಥವನ್ನು ನಿರ್ಮಿಸುತ್ತಿರುವುದು ಸೋಂದಾದ ಮುಸ್ಲಿಂ ಕುಟುಂಬ ಎಂಬುದೇ ವಿಶೇಷ.

ಹಸನ್ ಸಾಬ್ ಅಬ್ದುಲ್ ಖಾಜಿಸಾಬ್ ಎಂಬುವವರ ಕುಟುಂಬದ ನೇತೃತ್ವದಲ್ಲಿ ರವೂಫ್, ನಜೀರ, ಇತರರು ರಥ ನಿರ್ಮಾಣ ಕಾರ್ಯದಲ್ಲಿ ತೊಡಗುತ್ತಾರೆ. ರಥೋತ್ಸವ ಮುಗಿದ ಬಳಿಕ ರಥಕ್ಕೆ ಕಟ್ಟಿದ ಪರಿಕರ ಕಳಚುವ ಕೆಲಸವನ್ನೂ ನಿರ್ವಹಿಸುತ್ತಾರೆ. ಈ ಕಾರ್ಯಗಳಿಗೆ ಮಠದಿಂದ ಗೌರವಾರ್ಥವಾಗಿ ಧವಸ ಧಾನ್ಯಗಳನ್ನು ನೀಡುವ ಪದ್ಧತಿ ಇದೆ.

ADVERTISEMENT

‘ನೂರಾರು ವರ್ಷಗಳಿಂದ ಸ್ವರ್ಣವಲ್ಲಿ ಮಠದ ರಥ ನಿರ್ಮಿಸುವ ಕೆಲಸವನ್ನು ನಮ್ಮ ಪೂರ್ವಜರು ನಡೆಸಿಕೊಂಡು ಬಂದಿದ್ದರು. ಅದನ್ನು ನಾವೂ ಮುಂದುವರೆಸಿದ್ದೇವೆ. ಧರ್ಮ ಭೇದವನ್ನು ನಾವು ಎಂದಿಗೂ ಎಣಿಸಿಲ್ಲ’ ಎನ್ನುತ್ತಾರೆ ಹಸನ್ ಸಾಬ್.

‘ಮುಸ್ಲಿಂ ಸಮುದಾಯವರೇ ರಥ ಕಟ್ಟುವ ನಿರ್ದಿಷ್ಟ ಕಾರಣ ಅಥವಾ ಇತಿಹಾಸದ ಉಲ್ಲೇಖವಿಲ್ಲ. ಸೋದೆ ಅರಸರ ಕಾಲದಿಂದಲೂ ಸೋಂದಾ ಭಾಗದಲ್ಲಿ ಧಾರ್ಮಿಕ ಸಾಮರಸ್ಯವಿದ್ದು ರಥ ಕಟ್ಟುವ ಕಾರ್ಯವೂ ಅದರ ಮುಂದುವರಿದ ಭಾಗದಂತಿದೆ’ ಎನ್ನುತ್ತಾರೆ ಇತಿಹಾಸಕಾರ ಡಾ.ಲಕ್ಷ್ಮೀಶ ಸೋಂದಾ.

‘ಸಮಾಜದಲ್ಲಿ ಸೌಹಾರ್ದ ಮುಖ್ಯ. ಪರಸ್ಪರ ಗೌರವಿಸುವ ಗುಣ ಇದ್ದರೆ ಸಮಸ್ಯೆ ಉಂಟಾಗದು’ ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.