ಶಿರಸಿ: ತಾಲ್ಲೂಕಿನ ಸ್ವರ್ಣವಲ್ಲಿ ಮಠದಲ್ಲಿ ಸೆ.26 ರಿಂದ ಅ.5ರವರೆಗೆ ಅದ್ದೂರಿ ನವರಾತ್ರಿ ಉತ್ಸವ ನಡೆಯಲಿದೆ. ಹತ್ತು ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ಮಠದಲ್ಲಿ ಸೋಮವಾರ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಈ ಮಾಹಿತಿ ನೀಡಿದರು.
‘ಸೆ.26 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಆಚರಣೆ ಆರಂಭಗೊಳ್ಳಲಿದೆ. ಸೆ.30ರಂದು ಲಲಿತಾ ಪಂಚಮಿ, ಅ.2 ರಂದು ಶಾರದಾ ಸ್ಥಾಪನೆ, 3 ರಂದು ದುರ್ಗಾಷ್ಟಮಿ, 4 ರಂದು ಮಹಾನವಮಿ, ಲಕ್ಷ್ಮೀ ಪೂಜೆ, ಕ್ಷೇತ್ರಪಾಲ ಬಲಿ ಮತ್ತು 5 ರಂದು ವಿಜಯ ದಶಮಿ ಆಚರಣೆ ನಡೆಯಲಿದೆ. ಅಂದು ಸಂಜೆ 4.30ಕ್ಕೆ ಲಕ್ಷ್ಮೀ ನರಸಿಂಹ ದೇವರ ಸೀಮೋಲ್ಲಂಘನ, ಶಮಿಪೂಜೆ, ಅಷ್ಟಾವಧಾನ ಸೇವೆ ನಡೆಯಲಿದೆ. ಅ.6 ರಂದು ನವಚಂಡಿ ಹೋಮ ನಡೆಯಲಿದೆ. ಪ್ರತಿದಿನ ಸಂಜೆ 6.30 ರಿಂದ 8 ಗಂಟೆಯವರೆಗೆ ಸೇವಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ’ ಎಂದು ತಿಳಿಸಿದರು.
‘ಬೇಡ್ತಿ ವರದಾ ನದಿ ಜೋಡಣೆ ಯೋಜನೆ ಸರ್ಕಾರ ಜಾರಿಗೆ ತರುವುದಿಲ್ಲ ಎಂಬ ಭರವಸೆಯಿದೆ. ಯೋಜನೆಗೆ ಸಂಬಂಧಿಸಿದ ಡಿಪಿಆರ್ ರದ್ದು ಮಾಡುವುದು ಯೋಗ್ಯವಾಗಿದೆ. ವಿಧಾನಸಭೆ ಅಧಿವೇಶನದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಯೋಜನೆ ಕುರಿತು ಧ್ವನಿ ಎತ್ತಬೇಕು’ ಎಂದು ಪ್ರಶ್ನೆಯೊಂದಕ್ಕೆ ಸ್ವಾಮೀಜಿ ಪ್ರತಿಕ್ರಿಯಿಸಿದರು.
ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ, ವ್ಯವಸ್ಥಾಪಕ ಎಸ್.ಎನ್.ಗಾಂವಕರ ಬೆಳ್ಳಿಪಾಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.