ಸಿದ್ದಾಪುರ: ‘ಕೆಲವು ಜನಾಂಗಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತಿದ್ದು, ಇದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ’ ಎಂದು ತಹಶೀಲ್ದಾರ್ ಪಟ್ಟರಾಜ ಗೌಡ ಹೇಳಿದರು.
ಪಟ್ಟಣದ ರಾಘವೇಂದ್ರ ಮಠದ ಸಭಾಂಗಣದಲ್ಲಿ ಬುಧವಾರ ನಡೆದ ಆರೋಗ್ಯ ಕರ್ನಾಟಕ ಹಾಗೂ ಹೆರಿಗೆ ಪೂರ್ವ ಭ್ರೂಣ ಪತ್ತೆ ನಿಷೇಧ ಕುರಿತ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಮೊದಲು ‘ಮಕ್ಕಳಿರಲವ್ವ ಮನೆ ತುಂಬ’ ಎನ್ನಲಾಗುತ್ತಿತ್ತು. ನಂತರ ‘ಆರತಿಗೊಬ್ಬ ಮಗಳು, ಕೀರುತಿಗೊಬ್ಬ ಮಗ’ ಎಂಬ ಮಾತು ಜಾರಿಗೆ ಬಂದಿತು. ಈಗ ‘ಮಗನಿರಲಿ ಅಥವಾ ಮಗಳಿರಲಿ ಒಬ್ಬರೇ ಸಾಕು’ ಎಂಬ ಧೋರಣೆ ಬಂದಿದೆ. ಆದರೂ ಹಲವು ಕಾರಣಗಳಿಂದ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ’ ಎಂದರು.
ಬಿಇಒ ವಿ.ಆರ್. ನಾಯ್ಕ ಮಾತನಾಡಿ, ‘ನಮ್ಮ ಪ್ರಗತಿಯಲ್ಲಿ ಹೆಣ್ಣು ಮಕ್ಕಳ ಪಾಲು ಸಾಕಷ್ಟಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಹೆಣ್ಣು ಮಕ್ಕಳು ಸಾಧನೆ ಮಾಡುತ್ತಿದ್ದಾರೆ. ಆದರೂ ಗಂಡು ಮಗು ಹಾಗೂ ಹೆಣ್ಣು ಮಗು ಎಂಬ ತಾರತಮ್ಯ ಯಾಕೆ ಎಂದು ಅರ್ಥವಾಗುತ್ತಿಲ್ಲ’ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಜಿ.ನಾಯ್ಕ, ಮಕ್ಕಳು ಹಾಗೂ ಮಹಿಳಾ ಅಭಿವೃದ್ಧಿ ಅಧಿಕಾರಿ ಸಂತೋಷ ಡಿ., ತಾಲ್ಲೂಕು ಪಂಚಾಯ್ತಿ ವ್ಯವಸ್ಥಾಪಕ ದಿನೇಶ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ, ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಶ್ರೀನಿವಾಸ ಇದ್ದರು. ದಾಕ್ಷಾಯಿಣಿ ನಾಯ್ಕ ಪ್ರಾರ್ಥನಾ ಗೀತೆ ಹಾಡಿದರು. ಬಿ.ಗೌರಿ ಸ್ವಾಗತಿಸಿದರು. ಮಮತಾ ಕೊಡಿಯಾ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.