ADVERTISEMENT

ಅಂಕೋಲಾ: ಮನೆಮನೆಗೆ ತೆರಳಿ ಕೊರೊನಾ ಜಾಗೃತಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 14:33 IST
Last Updated 12 ಸೆಪ್ಟೆಂಬರ್ 2020, 14:33 IST
ಅಂಕೋಲಾ ತಾಲ್ಲೂಕಿನ ಬಳಲೆ ಗ್ರಾಮದಲ್ಲಿ ಅಧಿಕಾರಿಗಳ ತಂಡವು ಶನಿವಾರ ಮನೆ ಮನೆಗೆ ತೆರಳಿ ಕೋವಿಡ್ ಕುರಿತು ಜಾಗೃತಿ ಮೂಡಿಸಿತು
ಅಂಕೋಲಾ ತಾಲ್ಲೂಕಿನ ಬಳಲೆ ಗ್ರಾಮದಲ್ಲಿ ಅಧಿಕಾರಿಗಳ ತಂಡವು ಶನಿವಾರ ಮನೆ ಮನೆಗೆ ತೆರಳಿ ಕೋವಿಡ್ ಕುರಿತು ಜಾಗೃತಿ ಮೂಡಿಸಿತು   

ಕಾರವಾರ: ಕೋವಿಡ್ 19 ದೃಢಪಡುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ವಿವಿಧೆಡೆ ಸ್ವಯಂ ಪ್ರೇರಿತರಾಗಿ ಗಂಟಲುದ್ರವದ ಪರೀಕ್ಷೆಗೆ ಜನ ಹಿಂದೇಟು ಹಾಕುತ್ತಿದ್ದಾರೆ.

ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಅಂಕೋಲಾ ತಾಲ್ಲೂಕು ಆಡಳಿತದಿಂದ ಮನೆ ಮನೆಗೆ ತೆರಳಿ ಶನಿವಾರ ಮಾಹಿತಿ ನೀಡಲಾಯಿತು. ಹಿರಿಯರು, ಬಾಣಂತಿಯರು, ಸಣ್ಣ ಮಕ್ಕಳಿರುವ ಮನೆಗಳಲ್ಲಿ ಹೆಚ್ಚಿನ ಜಾಗೃತಿ ವಹಿಸಲು ಜನರಿಗೆ ತಿಳಿವಳಿಕೆ ನೀಡಲಾಯಿತು.

ರೋಗಲಕ್ಷಣ ಇಲ್ಲದಿದ್ದರೆ ಮನೆಯಲ್ಲೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆದುಕೊಳ್ಳಬಹುದು. ಅಗತ್ಯವಿದ್ದರೆ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಈ ಬಗ್ಗೆ ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಅರಿವು ಮೂಡಿಸಲಾಯಿತು.

ADVERTISEMENT

ತಾಲ್ಲೂಕಿನ ಬಳಲೆ ಗ್ರಾಮದಲ್ಲಿ ಗ್ರಾಮಸ್ಥರ ಗಂಟಲುದ್ರವದ ಮಾದರಿಗಳನ್ನೂ ಸಂಗ್ರಹಿಸಲಾಯಿತು. ಅಧಿಕಾರಿಗಳ ತಂಡದಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಪರಶುರಾಮ ಸಾವಂತ,ತಹಶೀಲ್ದಾರ್ ಉದಯ ಕಂಬಾರ, ತಾಲ್ಲೂಕು ವೈದ್ಯಾಧಿಕಾರಿ ಡಾ.ಅರ್ಚನಾ ನಾಯಕ, ಅಂಕೋಲಾ ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ, ಪೊಲೀಸ್ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್: ಅಂಕಿ ಅಂಶ

* ಒಟ್ಟು ಸೋಂಕಿತರು-1,859

*ಸಕ್ರಿಯ ಪ್ರಕರಣಗಳು-117

* ಹೊಸ ಪ್ರಕರಣಗಳು-4,865

* ಗುಣಮುಖರಾದವರು-86

* ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾದವರು-80

* ಮೃತರು-1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.