ADVERTISEMENT

ಯಲ್ಲಾಪುರ ಕ್ಷೇತ್ರ | ಬಹಿರಂಗ ಪ್ರಚಾರಕ್ಕೆ ತೆರೆ, ಮನೆಗೆ ಭೇಟಿ ನೀಡಿ ಮನವೊಲಿಕೆ

ಮನೆಗಳಿಗೆ ತೆರಳಿ ಮತಯಾಚಿಸುತ್ತಿರುವ ಕಾರ್ಯಕರ್ತರು, ಬೀಡುಬಿಟ್ಟಿದ್ದ ನಾಯಕರು ಮರಳಿ ಮನೆಗೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 14:54 IST
Last Updated 3 ಡಿಸೆಂಬರ್ 2019, 14:54 IST
ಯಲ್ಲಾಪುರ ವಿಶ್ವದರ್ಶನ ಶಾಲೆಯ ಮಸ್ಟರಿಂಗ್ ಸೆಂಟರ್
ಯಲ್ಲಾಪುರ ವಿಶ್ವದರ್ಶನ ಶಾಲೆಯ ಮಸ್ಟರಿಂಗ್ ಸೆಂಟರ್   

ಶಿರಸಿ: ಡಿ.5ರಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮಂಗಳವಾರ ತೆರೆಬಿದ್ದಿದೆ. ವಾರದಿಂದ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದ ವಿವಿಧ ಪಕ್ಷಗಳ ಮುಖಂಡರು, ಸ್ವಕ್ಷೇತ್ರಕ್ಕೆ ಮರಳಿದ್ದಾರೆ.

ಮಂಗಳವಾರ ಸಂಜೆ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಯಲ್ಲಾಪುರದಲ್ಲಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಬನವಾಸಿಯಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು. ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತದಾರರ ಮನೆಗೆ ತೆರಳಿ ಮತ ಹಾಕುವಂತೆ ವಿನಂತಿಸುತ್ತಿದ್ದಾರೆ.

ಜಿಲ್ಲಾಡಳಿತವು ಸುವ್ಯವಸ್ಥಿತ ಚುನಾವಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಚುನಾವಣಾ ಕರ್ತವ್ಯಕ್ಕೆ 1020 ಸಿಬ್ಬಂದಿ ನೇಮಿಸಲಾಗಿದೆ. ಈ ಸಿಬ್ಬಂದಿ ಯಲ್ಲಾಪುರ ವಿಶ್ವದರ್ಶನ ಶಾಲೆಯ ಮಸ್ಟರಿಂಗ್ ಸೆಂಟರ್‌ನಿಂದ ಕರ್ತವ್ಯಕ್ಕೆ ನಿಯೋಜನೆಗೊಂಡ ಮತಗಟ್ಟೆಗಳಿಗೆ ಬುಧವಾರ ಬೆಳಿಗ್ಗೆ ತೆರಳಲಿದ್ದಾರೆ.

ADVERTISEMENT

ಕ್ಷೇತ್ರದಲ್ಲಿ 94 ಮೈಕ್ರೊ ವೀಕ್ಷಕರು, 1344 ಪೊಲೀಸ್ ಸಿಬ್ಬಂದಿ, ಮೂರು ಸಿಆರ್‌ಪಿಎಫ್ ಪಡೆಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 13 ಅತಿಸೂಕ್ಷ್ಮ, 103 ಸೂಕ್ಷ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಐದು ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ (ಮತದಾನ ಪ್ರಕ್ರಿಯೆಯ ನೇರ ವೀಕ್ಷಣೆಗೆ ಅವಕಾಶ) ಸೌಲಭ್ಯ ಒದಗಿಸಲಾಗಿದೆ. ಮತಪೆಟ್ಟಿಗೆ ಸಾಗಣೆಗೆ 37 ಬಸ್, 22 ಟ್ರ್ಯಾಕ್ಸ್, 11 ಮ್ಯಾಕ್ಸಿಕ್ಯಾಬ್, ಒಂದು ಮಿನಿ ಬಸ್ ವ್ಯವಸ್ಥೆಗೊಳಿಸಲಾಗಿದೆ. ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ವಿಡಿಯೊಗ್ರಾಫರ್‌ಗಳನ್ನು ನೇಮಿಸಲಾಗುವುದು ಎಂದು ಚುನಾವಣಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.