ADVERTISEMENT

ನದಿ ಜೋಡಣೆ ಯೋಜನೆ ಜಾರಿಗೊಳಿಸದಿರಲು ನಿರ್ಣಯ

ಬೇಡ್ತಿ-ವರದಾ ನದಿ ಜೋಡಣೆ ಜನಜಾಗೃತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 16:20 IST
Last Updated 14 ಜೂನ್ 2022, 16:20 IST
ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಕೈಬಿಡಲು ಒತ್ತಾಯಿಸಿ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಗೊರ್ಸಗದ್ದೆ ಕ್ರಾಸ್ ನಿಂದ ಮಂಚಿಕೇರಿಯ ಸಮಾಜ ಮಂದಿರದವರೆಗೆ ಅಘನಾಶಿನಿ, ಬೇಡ್ತಿ ಕೊಳ್ಳದ ವಿವಿಧ ಗ್ರಾಮಗಳ ಜನರು ಪಾದಯಾತ್ರೆ ನಡೆಸಿದರು
ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಕೈಬಿಡಲು ಒತ್ತಾಯಿಸಿ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಗೊರ್ಸಗದ್ದೆ ಕ್ರಾಸ್ ನಿಂದ ಮಂಚಿಕೇರಿಯ ಸಮಾಜ ಮಂದಿರದವರೆಗೆ ಅಘನಾಶಿನಿ, ಬೇಡ್ತಿ ಕೊಳ್ಳದ ವಿವಿಧ ಗ್ರಾಮಗಳ ಜನರು ಪಾದಯಾತ್ರೆ ನಡೆಸಿದರು   

ಶಿರಸಿ: ಪಶ್ಚಿಮ ಘಟ್ಟದ ಯಾವುದೇ ನದಿ ತಿರುಗಿಸುವ ಯೋಜನೆ ಕೈಗೊಳ್ಳುವ ನಿರ್ಧಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಳ್ಳದಂತೆ ಒತ್ತಡ ತರುವ ನಿರ್ಣಯವನ್ನು ಬೇಡ್ತಿ-ವರದಾ ನದಿ ಜೋಡಣೆ ಕುರಿತ ಜನಜಾಗೃತಿ ಸಮಾವೇಶದಲ್ಲಿ ಕೈಗೊಳ್ಳಲಾಯಿತು.

ಬೇಡ್ತಿ ಮತ್ತು ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಈ ಸಮಾವೇಶ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ನಡೆಯಿತು. ನೂರಾರು ಜನರು ಪಾಲ್ಗೊಂಡಿದ್ದರು.

ಅವೈಜ್ಞಾನಿಕವಾದ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಕೈಬಿಡುವ ಜತೆಗೆ, ಎತ್ತಿನಹೊಳೆ ನದಿ ತಿರುವು ಬೃಹತ್ ಯೋಜನೆ ವಿಫಲವಾಗಿರುವುದನ್ನು ಗಮನದಲ್ಲಿಟ್ಟು ದಕ್ಷಿಣಭಾರತದ ನೀರಿನ ಸುರಕ್ಷತೆಯ ದೃಷ್ಟಿಯಿಂದಸರ್ಕಾರಗಳುಇಂತಹಯೋಜನೆಕೈಗೊಳ್ಳಬಾರದು ಎಂಬ ಒತ್ತಾಯ ಸಮಾವೇಶದಲ್ಲಿ ಕೇಳಿಬಂತು.

ADVERTISEMENT

‘ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷ ಬೇಧ ಮರೆತು ಒಕ್ಕೊರಲಿನಿಂದ ಬೇಡ್ತಿ -ವರದಾ ಯೋಜನೆಯನ್ನು ಅನುಷ್ಠಾನ ಮಾಡದಂತೆ ಸರ್ಕಾರಕ್ಕೆ ಒತ್ತಡ ಹಾಕಬೇಕು. ಕಾಳಿ ನದಿ ತಿರುಗಿಸುವ ಯೋಜನೆಯ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಬೇಕು’ ಎಂದು ಸ್ವರ್ಣವಲ್ಲಿ ಸ್ವಾಮೀಜಿ ಹೇಳಿದರು.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ‘ಜನರ ಭಾವನೆಗೆ ಸ್ಪಂದಿಸಿ ಯೋಜನೆ ಪರಾಮರ್ಶೆಗೆ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗವನ್ನು ಕೊಂಡೊಯ್ಯಲಾಗುವುದು. ಯೋಜನೆಯ ಬಾಧಕದ ಕುರಿತು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು’ ಎಂದರು.

ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ಧಿ, ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ, ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಜೆಡಿಎಸ್‌ ಮುಖಂಡ ಶಶಿಭೂಷಣ ಹೆಗಡೆ, ಪರಿಸರ ಬರಹಗಾರ ಶಿವಾನಂದ ಕಳವೆ, ಸಂರಕ್ಷಣಾ ಜೀವಶಾಸ್ತ್ರಜ್ಞ ಡಾ.ಕೇಶವ ಕೊರ್ಸೆ, ಬಾಲಚಂದ್ರ ಸಾಯಿಮನೆ, ಡಾ.ಜಿ.ವಿ.ಹೆಗಡೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.