ಕಾರವಾರ: ತಾಲ್ಲೂಕಿನ ಕಡವಾಡ ಗ್ರಾಮದಲ್ಲಿ ನಾಲ್ಕು ದಿನಗಳಿಂದ ವಿದ್ಯುತ್ ಪೂರೈಕೆಯಲ್ಲಿ ನಿರಂತರವಾಗಿ ವ್ಯತ್ಯಯ ಆಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಇಲ್ಲಿನ ಹೆಸ್ಕಾಂ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿದರು.
ಕಚೇರಿಗೆ ದೂರು ನೀಡಲು ಬಂದರೂ ಅಧಿಕಾರಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿ, ಹೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಮಳೆಗಾಲದ ಆರಂಭದಲ್ಲಿಯೇ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದರೆ, ಮಳೆಗಾಲದಲ್ಲಿ ವಿದ್ಯುತ್ ಪೂರೈಕೆ ಬಗ್ಗೆ ಜನರು ವಿಶ್ವಾಸ ಹೇಗೆ ಇಡಬೇಕು ಎಂದು ಸಿಬ್ಬಂದಿಯನ್ನು ತರಾಟೆಗೆ ಪಡೆದರು.
‘ವಿದ್ಯುತ್ ವ್ಯತ್ಯಯದ ಕುರಿತು ದೂರು ನೀಡಲು ಕರೆ ಮಾಡಿದರೆ ಅಧಿಕಾರಿಗಳಾಗಲಿ, ಹೆಸ್ಕಾಂ ಕಚೇರಿಯಲ್ಲಾಗಲಿ ಕರೆ ಸ್ವೀಕರಿಸುವುದಿಲ್ಲ. ದುರಸ್ತಿಗೆ ಅಗತ್ಯ ಸಿಬ್ಬಂದಿಯನ್ನೂ ನೀಡುತ್ತಿಲ್ಲ. ನಾಲ್ಕು ದಿನಗಳಿಂದ ಗ್ರಾಮ ಕತ್ತಲಲ್ಲಿದೆ. ರಾತ್ರಿ ವೇಳೆಯಲ್ಲಂತೂ ವಿದ್ಯುತ್ ಪೂರೈಕೆಯನ್ನೇ ಸ್ಥಗಿತಗೊಳಿಸಲಾಗುತ್ತಿದೆ’ ಎಂದು ಕಡವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದು ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.
ದೇವರಾಜ್ ನಾರ್ವೇಕರ್, ನಂದಾ ದೇವಳಿ, ಕಿಶೋರ್ ಕಡವಾಡಕರ್, ವಿನಾಯಕ ಭೋವಿ, ರೋಷನ್ ಭೋವಿ, ಪ್ರಕಾಶ ಭೋವಿ, ಪ್ರಸಾದ ಭೋವಿ, ಬಾಳು ಬಾಂದೇಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.