ಕಾರವಾರ: ‘ದೇಶದಲ್ಲಿ ಡಿಎಪಿ ರಸಗೊಬ್ಬರ ಬಳಕೆ ನಿಯಂತ್ರಿಸಲು ಅಭಿಯಾನ ನಡೆದಿದ್ದು, ರಾಜ್ಯದಲ್ಲೂ ಬಳಕೆ ಕಡಿಮೆಯಾಗಬೇಕು’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಜೊಯಿಡಾ ತಾಲ್ಲೂಕನ್ನು ರಾಜ್ಯದ ಮೊದಲ ಸಾವಯವ ತಾಲ್ಲೂಕಾಗಿ ಪರಿವರ್ತಿಸುವ ಪ್ರಕ್ರಿಯೆಗೆ ಮಂಗಳವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
‘ರಾಸಾಯನಿಕ ಗೊಬ್ಬರ ಬಳಕೆ ಪ್ರಮಾಣ ಈ ತಾಲ್ಲೂಕಿನಲ್ಲಿ ಕಡಿಮೆಯಿದ್ದು, ಪೂರ್ಣ ತಡೆಗಟ್ಟುವ ಗುರಿಯಿದೆ. ಸಾವಯವ ಪದಾರ್ಥಗಳಿಗೆ ಮಾರುಕಟ್ಟೆ ಒದಗಿಸುವುದು ಸೇರಿ ಸಾವಯವ ಪದ್ಧತಿ ಬಲಗೊಳಿಸಲು ಹಂತ ಹಂತವಾಗಿ ಜಾರಿಗೊಳಿಸಲಿದ್ದೇವೆ’ ಎಂದರು.
‘ಈ ಬಾರಿ 69,526 ಟನ್ ಡಿಎಪಿ ರಸಗೊಬ್ಬರ ದಾಸ್ತಾನಿದೆ. ಕಬ್ಬು ಕಟಾವು ಯಂತ್ರಗಳ ಖರೀದಿಗೆ ಪರಿಶಿಷ್ಟ ಸಮುದಾಯದವರಿಗೆ ₹50 ಲಕ್ಷ, ಸಾಮಾನ್ಯ ವರ್ಗದ ರೈತರಿಗೆ ₹40 ಲಕ್ಷ ಸಹಾಯಧನ ನೀಡುವ ಮೂಲಕ ದೇಶದಲ್ಲೇ ಮಾದರಿ ಸೌಲಭ್ಯ ಕಲ್ಪಿಸಿದ್ದೇವೆ’ ಎಂದರು.
ನಂತರ ಅವರು, ಹಳಿಯಾಳದಲ್ಲಿ ಮುಂಗಾರು ಅವಧಿ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದರು. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.