ಶಿರಸಿ: ನೀರಿನ ಬವಣೆ ನಿವಾರಿಸಲು ರೋಟರಿ ಕ್ಲಬ್ ಮತ್ತು ಎಂ.ಇ.ಎಸ್ ಶಿಕ್ಷಣ ಸಂಸ್ಥೆ ಜಂಟಿಯಾಗಿ ಅನುಷ್ಠಾನಗೊಳಿರುವ ಮಾದರಿ ನೀರುಳಿಸುವ ಹಾಗೂ ನೀರಿಂಗಿಸುವ ಯೋಜನೆಯನ್ನು ಭಾನುವಾರ ವಿಧ್ಯುಕ್ತವಾಗಿ ಲೋಕಾರ್ಪಣೆ ಮಾಡಲಾಯಿತು.
ಎಂಇಎಸ್ ಸಂಸ್ಥೆಯ ಕಲಾ ಮತ್ತು ವಿಜ್ಞಾನ ಕಾಲೇಜು, ವಾಣಿಜ್ಯ ಕಾಲೇಜು ಹಾಗೂ ಕಾನೂನು ಕಾಲೇಜಿನ ವಿದ್ಯಾರ್ಥಿನಿಯರ ವಸತಿ ನಿಲಯಗಳಲ್ಲಿ ಉಂಟಾಗುತ್ತಿದ್ದ ನೀರಿನ ಸಮಸ್ಯೆಯನ್ನು ನೀಗಿಸಲು ಶಿರಸಿ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಮಳೆ ನೀರು ಸಂಗ್ರಹ, ಇಂಗಿಸುವಿಕೆ ಹಾಗೂ ಪುನರ್ ಬಳಕೆಗಾಗಿ ಸ್ಥಾಪಿಸಿದ ಘಟಕಗಳಲ್ಲಿ 6.5 ಲಕ್ಷ ಲೀಟರ್ ನೀರು ಸಂಗ್ರಹವಾಗಿರುವುದನ್ನು ಗಣ್ಯರು ವೀಕ್ಷಿಸಿದರು.
ನಾಲ್ಕು ಕಡೆಗಳಲ್ಲಿ ಒಟ್ಟು 130 ಟ್ಯಾಂಕ್ಗಳನ್ನು ಅಳವಡಿಸಲಾಗಿದೆ. ಅಂತರರಾಷ್ಟ್ರೀಯ ರೋಟರಿ ಸಂಸ್ಥೆ 3170 ಕಂದಾಯ ಜಿಲ್ಲೆಯ ಮಾಜಿ ಜಿಲ್ಲಾ ಪ್ರಾಂತಪಾಲ ಆನಂದ ಕುಲಕರ್ಣಿ, ಡಾ. ಪ್ರಾಣೇಶ ಜಾಗಿರದಾರ, ಎಂ.ಇ.ಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಹಾಗೂ ಅಮೆರಿಕ ಚೆಸ್ಟರ್ ಕೌಂಟಿ ರೋಟರಿ ಕ್ಲಬ್ನ ವಸಂತ ಪ್ರಭು ಅವರು ನೂತನ ಘಟಕವನ್ನು ಉದ್ಘಾಟಿಸಿದರು.
ಯೋಜನೆಗೆ ₹ 58 ಲಕ್ಷ ವೆಚ್ಚ ತಗುಲಿದ್ದು, ಎಂಇಎಸ್ ಶಿಕ್ಷಣ ಸಂಸ್ಥೆ ತನ್ನ ಪಾಲಾಗಿ ₹ 10 ಲಕ್ಷ ನೀಡಿದೆ. ವಿವಿಧೆಡೆಯ ರೋಟರಿ ಸದಸ್ಯರು ಸಹಕಾರ ನೀಡಿದ್ದಾರೆ ಎಂದು ರೋಟರಿಯ ನಿಕಟಪೂರ್ವ ಅಧ್ಯಕ್ಷ ಪ್ರವೀಣ ಕಾಮತ್ ತಿಳಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಡಾ. ಶಿವರಾಮ ಕೆ.ವಿ, ಶ್ಯಾಮಸುಂದರ ಭಟ್ಟ, ಪಾಂಡುರಂಗ ಪೈ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.