
ಕಾರವಾರ: ‘ಭೋಗ ಭೂಮಿಯನ್ನು ತ್ಯಾಗ ಭೂಮಿಯಾಗಿ ಪರಿವರ್ತಿಸಲು ಪರ್ತಗಾಳಿ ಮಠ ಸಂಕಲ್ಪ ತೊಟ್ಟಿದೆ. ಇಲ್ಲಿ ತಲೆ ಎತ್ತಲಿರುವ ಶ್ರೀರಾಮನ ಭವ್ಯಮೂರ್ತಿ ಸನಾತನ ಧರ್ಮದ ರಕ್ಷಣೆಯ ಪ್ರತೀಕವಾಗಲಿದೆ’ ಎಂದು ಪಲಿಮಾರು ಮಠದ ಪೀಠಾಧಿಪತಿ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.
ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಕ್ಕೆ 550 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಸಾರ್ಧ ಪಂಚಶತಮಾನೋತ್ಸವದ ಕಾರ್ಯಕ್ರಮದ ಮೊದಲ ದಿನವಾದ ಗುರುವಾರ ಧರ್ಮಸಭೆ ಉದ್ದೇಶಿಸಿ ಅವರು ಮಾತನಾಡಿದರು.
‘ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಿಸಿ, ಮೂರ್ತಿ ಪ್ರತಿಷ್ಠಾಪಿಸಿದವರೇ ಪರ್ತಗಾಳಿಯಲ್ಲಿ ದೇಶದಲ್ಲೇ ಎತ್ತರದ ಶ್ರೀರಾಮನ ಮೂರ್ತಿ ಲೋಕಾರ್ಪಣೆ ಮಾಡಲಿದ್ದಾರೆ. 77 ಅಡಿ ಎತ್ತರದ ಮೂರ್ತಿ ನಿರ್ಮಾಣದ ಹಿಂದೆ ಆಧ್ಯಾತ್ಮಿಕ ಕಾರಣಗಳಿವೆ. ಧನಸ್ಸು ಹಿಡಿದು ನಿಂತ ಶ್ರೀರಾಮ ದುಷ್ಟಶಕ್ತಿ ನಿವಾರಿಸಿ, ಶಿಷ್ಟರ ರಕ್ಷಣೆ ಮಾಡುವ ಅಭಯದ ಸಂಕೇತ’ ಎಂದರು.
ಪಲಿಮಾರು ಮಠದ ವಿದ್ಯಾರಾಜೇಶ್ವರ ಸ್ವಾಮೀಜಿ ಮಾತನಾಡಿ, ‘ಪರ್ತಗಾಳಿ ಎನ್ನುವುದು ಒಂದು ಪವಿತ್ರಗಾಳಿಯಾಗಿದೆ’ ಎಂದರು.
ಗೋಕರ್ಣ ಪರ್ತಗಾಳಿ ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ‘ಪಲಿಮಾರು ಮಠದಿಂದಲೆ ಪರ್ತಗಾಳಿ ಮಠದ ಬೇರು ಆರಂಭವಾಗಿದ್ದು, ಮೊದಲ ಧರ್ಮ ಸಭೆಯಲ್ಲಿ ಗುರುಗಳ ಅನುಗ್ರಹವಾಗಿದೆ’ ಎಂದರು
ಶಿವಾನಂದ ಸಾಲಗಾಂವಕರ್, ಪ್ರದೀಪ ಪೈ, ಮುಕುಂದ ಪೈ, ಟಿ.ವಿ.ಮೋಹನದಾಸ ಪೈ, ಕೆ.ಉಲ್ಲಾಸ ಕಾಮತ, ಇತರರು ಪಾಲ್ಗೊಂಡಿದ್ದರು. ರಾಮಕೃಷ್ಣ ಭಟ್ ಬ್ರಹ್ಮಾವರ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಹಳದಿಪರದ ಎಚ್.ಎನ್.ಪೈ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.