ಮುಂಡಗೋಡ: ಗಂಧದ ಗಿಡ ಕತ್ತರಿ ಸುವ ಕೃತ್ಯ ತಾಲ್ಲೂಕಿನಲ್ಲಿ ಮುಂದುವರಿ ದಿದ್ದು, ಬಾಚಣಕಿ ಹಾಗೂ ಚಿಗಳ್ಳಿ ಗ್ರಾಮದಲ್ಲಿ ಶುಕ್ರವಾರ ಐದು ಗಂಧದ ಗಿಡಗಳನ್ನು ಕಳ್ಳರು ದೋಚಿದ್ದಾರೆ.
‘ಮಧ್ಯರಾತ್ರಿ ನಾಲ್ಕು ಜನರ ತಂಡವು ಗಂಧದ ಗಿಡವನ್ನು ಕತ್ತರಿಸುತ್ತಿತ್ತು. ಅವರನ್ನು ಹಿಡಿಯಲು ಗ್ರಾಮಸ್ಥರು ಮುಂದಾಗುತ್ತಿದ್ದಂತೆ, ಕಟ್ಟಿಗೆ ಸಮೇತ ಪರಾರಿಯಾದರು’ ಎಂದು ಬಾಚಣಕಿ ಗ್ರಾಮದ ರೈತ ಶಿವಪ್ಪ ಗುಂಜಾಳ ಹೇಳಿದರು.
‘ಮಧ್ಯರಾತ್ರಿ ಗಿಡ ಕತ್ತರಿಸುತ್ತಿರುವ ಶಬ್ದ ಕೇಳಿತು. ಮನೆಯ ಗೇಟ್ ಸಹ ತೆರೆದಿತ್ತು. ಇದರಿಂದ ಅನುಮಾನಗೊಂಡು ಹಿತ್ತಲಿನಲ್ಲಿ ಬೆಳಕು ಬಿಟ್ಟು ನೋಡಿದರೂ ಏನೂ ಕಾಣಲಿಲ್ಲ. ಆದರೆ ಬೆಳಗಿನ ಜಾವ ನೋಡಿದಾಗ ಒಟ್ಟು 15 ಗಂಧದ ಗಿಡಗಳ ಪೈಕಿ 9 ಗಿಡಗಳನ್ನು ಕತ್ತರಿಸಿ ಬಿಟ್ಟಿರುವುದು ಕಂಡುಬಂತು’ ಎಂದು ರೈತ ಶ್ರೀಪಾದ ಹೇಳಿದರು.
‘ಚಿಗಳ್ಳಿ ಗ್ರಾಮದಲ್ಲಿ ಉಲ್ಲಾಸ ಕುಲಕರ್ಣಿ ಅವರ ಮನೆ ಎದುರಿಗೆ ಇದ್ದ ಗಂಧದ ಗಿಡ, ಝಂಡೆಕಟ್ಟಿ ಹತ್ತಿರವಿದ್ದ ಮೂರು ಗಿಡಗಳನ್ನು ಕತ್ತರಿಸಿದ್ದಾರೆ’ ಎಂದು ವಕೀಲ ಅಜ್ಜಯ್ಯ ಶಿವಯೋಗಿಮಠ ತಿಳಿಸಿದ್ದಾರೆ.
ಇಂದೂರ ಉಪವಲಯ ಅರಣ್ಯಾಧಿಕಾರಿ ಬಸವರಾಜ ಪೂಜಾರಿ ಹಾಗೂ ಸಿಬ್ಬಂದಿ ಬಾಚಣಕಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಳೆದ ಒಂದು ತಿಂಗಳ ಅವಧಿಯಲ್ಲಿ ನ್ಯಾಸರ್ಗಿ, ಟಿಬೆಟನ್ ಕ್ಯಾಂಪ್ ಸೇರಿದಂತೆ ಇತರ ಕಡೆ ಗಂಧದ ಗಿಡ ಕಡಿದಿರುವ ಘಟನೆ ನಡೆದಿರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.