ADVERTISEMENT

ಹೊನ್ನಾವರ | 'ಶರಾವತಿ ಭೂಗತ ವಿದ್ಯುತ್ ಯೋಜನೆ ಬೇಡ'

ವಿಚಾರ ಸಂಕಿರಣದಲ್ಲಿ ಸರ್ವಾನುಮತದ ನಿರ್ಣಯ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 6:07 IST
Last Updated 25 ಆಗಸ್ಟ್ 2025, 6:07 IST
ಶರಾವತಿ ಅಭಯಾರಣ್ಯ ಬಳಿ ಭೂಗತ ಜಲವಿದ್ಯುತ್‌ ಯೋಜನೆ
ಶರಾವತಿ ಅಭಯಾರಣ್ಯ ಬಳಿ ಭೂಗತ ಜಲವಿದ್ಯುತ್‌ ಯೋಜನೆ   

ಹೊನ್ನಾವರ: ಶರಾವತಿ ಭೂಗತ ವಿದ್ಯುತ್ ಯೋಜನೆ ಅನುಷ್ಠಾನಗೊಳಿಸಬಾರದು ಹಾಗೂ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಸುವ ಸಾರ್ವಜನಿಕ ಸಮಾಲೋಚನಾ ಸಭೆ ರದ್ದು ಪಡಿಸಬೇಕು ಎಂದು ಶರಾವತಿ ನದಿ ಕೊಳ್ಳ ಉಳಿಸಿ ಹೋರಾಟ ಸಮಿತಿ ಹಾಗೂ ಇತರ ಸಂಘಟನೆಗಳಿಂದ ತಾಲ್ಲೂಕಿನ ಬಂಗಾರಮಕ್ಕಿಯಲ್ಲಿ ಭಾನುವಾರ ನಡೆದ ಶರಾವತಿ ಭೂಗತ ವಿದ್ಯುತ್ ಯೋಜನೆ ಕುರಿತ ವಿಚಾರ ಸಂಕಿರಣದಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು.

ಶರಾವತಿ ಭೂಗತ ವಿದ್ಯುತ್ ಯೋಜನೆಯಿಂದ ಸಿಂಗಳಿಕದಂತ ಅಪರೂಪದ ಜೀವ ಸಂಕುಲಗಳು ನಾಶವಾಗಲಿವೆ. ಅರಣ್ಯ ನಾಶದ ಜೊತೆಗೆ ಶರಾವತಿ ನದಿಯಲ್ಲಿ ಉಪ್ಪು ನೀರು ನುಗ್ಗಿ ಜನರು ಕುಡಿಯುವ ನೀರಿಗೂ ತತ್ವಾರ ಉಂಟಾಗಲಿದೆ. ಪಶ್ಚಿಮ ಘಟ್ಟದಲ್ಲಿ ಸುರಂಗ ಕೊರೆಯುವುದರಿಂದ ಭೂಕುಸಿತ ಉಂಟಾಗಿ ವೈನಾಡಿನಲ್ಲಿ ಉಂಟಾದ ಪರಿಸ್ಥಿತಿ ಶರಾವತಿ ಕೊಳ್ಳ ಪ್ರದೇಶದಲ್ಲಿಯೂ ನಿರ್ಮಾಣವಾಗಲಿದೆ  ಎಂದು ಸಪರಿಸರ ತಜ್ಞರು ಹಾಗೂ ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಯೋಜನೆಗೆ ಒಪ್ಪಿಗೆ ನೀಡಿದರೆ ನಗರಬಸ್ತಿಕೇರಿ ಗ್ರಾಮ ಪಂಚಾಯಿತಿಗೆ ₹35 ಕೋಟಿ ಅಭಿವೃದ್ಧಿ ಅನುದಾನ ನೀಡಲಾಗುವುದು ಎಂದು ಕೆಪಿಸಿ ಅಧಿಕಾರಿಗಳು ಆಮಿಷ ಒಡ್ಡಿದ್ದಾರೆ ಎಂಬ ವಿಷಯದ ಕುರಿತು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ADVERTISEMENT

ಕೆಪಿಸಿ ಹಿಂದಿನಿಂದಲೂ ಸ್ಥಳೀಯರಿಗೆ ಯಾವುದೇ ಅನುಕೂಲ ಕಲ್ಪಿಸಿಲ್ಲ. ಭೂಗತ ವಿದ್ಯುತ್ ಯೋಜನೆ ಬೇಡವೆಂದು ಗ್ರಾಮ ಸಭೆಯಲ್ಲಿ ಈಗಾಗಲೇ ನಿರ್ಣಯ ಕೈಗೊಳ್ಳಲಾಗಿದೆ. ಜನಜೀವನಕ್ಕೆ ಯೋಜನೆಯಿಂದ ತೊಂದರೆಯಾಗುವುದರಿಂದ ಅಭಿವೃದ್ಧಿ ಅನುದಾನದ ಆಮಿಷಕ್ಕೆ ಬಲಿಯಾಗುವುದಿಲ್ಲ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ತಿಳಿಸಿದರು.

ಯೋಜನೆ ಕುರಿತಾದ ಸಂಪೂರ್ಣ ಮಾಹಿತಿಯನ್ನು ಕನ್ನಡದಲ್ಲಿ ಪ್ರಕಟಿಸಿ ನಗರಬಸ್ತಿಕೇರಿ, ಕುದ್ರಗಿ ಹಾಗೂ ಉಪ್ಪೋಣಿ ಗ್ರಾಮ ಪಂಚಾಯಿತಿಗಳಿಗೆ ನೀಡಬೇಕು ಹಾಗೂ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾದೀನ ಪ್ರಕ್ರಿಯೆ ಕೈಗೊಳ್ಳಬಾರದು ಎಂದು ಆಗ್ರಹಿಸಲಾಯಿತು.

ಚಂದ್ರಕಾಂತ ಕೊಚರೇಕರ ನಿರ್ಣಯ ಮಂಡಿಸಿದರು. ಧರ್ಮಾಧಿಕಾರಿ ಮಾರುತಿ ಗುರೂಜಿ ಮಾತನಾಡಿದರು. ವಿಜ್ಞಾನಿ ಟಿ.ವಿ. ರಾಮಚಂದ್ರ, ಎಂ.ಡಿ.ಸುಭಾಶ್ಚಂದ್ರನ್, ಪರಿಸರ ತಜ್ಞರಾದ ಶಂಕರ ಶರ್ಮ, ಅಖಿಲೇಶ ಚಿಪ್ಪಳಿ, ನಿರ್ಮಲಾ ಗೌಡ, ಕುಮಾರಸ್ವಾಮಿ, ನಗರಬಸ್ತಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾ ಹೆಗಡೆ, ಉಪಾಧ್ಯಕ್ಷ ಮಂಜುನಾಥ ನಾಯ್ಕ, ಗೋವಿಂದ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.