ಕಾರವಾರ: ಅಂಕೋಲಾ ತಾಲ್ಲೂಕಿನ ಶಿರೂರು ಬಳಿ ಗುಡ್ಡ ಕುಸಿದು 11 ಜನರು ಮೃತಪಟ್ಟ ಘಟನೆ ಸಂಭವಿಸಿ ಇದೇ ಜುಲೈ ತಿಂಗಳಿಗೆ ಒಂದು ವರ್ಷವಾಗಲಿದೆ. ಘೋರ ದುರಂತದ ವೇಳೆ ಪಕ್ಕದ ಗಂಗಾವಳಿ ನದಿಗೆ ಬಿದ್ದಿರುವ ಮಣ್ಣಿನ ರಾಶಿ ಈವರೆಗೂ ತೆರವು ಆಗಿಲ್ಲ. ಇದರ ಪರಿಣಾಮ ಮಳೆಗಾಲದಲ್ಲಿ ಪ್ರವಾಹ ಸ್ಥಿತಿ ಎದುರಾಗಬಹುದಾದ ಎಂಬ ಆತಂಕ ನದಿ ತಟದ ಗ್ರಾಮಸ್ಥರಲ್ಲಿ ಕಾಡುತ್ತಿದೆ.
2024ರ ಜುಲೈ 16 ರಂದು ಶಿರೂರಿನಲ್ಲಿ ಗುಡ್ಡ ಕುಸಿದಿತ್ತು. ಗುಡ್ಡದಿಂದ ಜರಿದು ಬಿದ್ದ ಅಪಾರ ಪ್ರಮಾಣದ ಮಣ್ಣು, ಕಲ್ಲಿನ ರಾಶಿಗಳು ರಾಷ್ಟ್ರೀಯ ಹೆದ್ದಾರಿ–66ನ್ನು ಆವರಿಸಿಕೊಂಡು, ಅದರ ಪಕ್ಕದಲ್ಲಿ ಹರಿಯುವ ನದಿಯಲ್ಲಿ ಬಿದ್ದಿದ್ದವು. ಸುಮಾರು 50 ಮೀಟರ್ ವ್ಯಾಪ್ತಿಯಲ್ಲಿ ಬಿದ್ದ ಮಣ್ಣಿನ ರಾಶಿ ಈವರೆಗೂ ತೆರವು ಆಗಿಲ್ಲ. ಇದರಿಂದ ವಾಸರ ಕುದ್ರಿಗೆ, ಬೆಳಸೆ, ಶಿರೂರು, ಉಳುವರೆ ಸೇರಿ ಹಲವು ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ.
‘ಗುಡ್ಡ ಕುಸಿದು ಮಣ್ಣು, ಕಲ್ಲಿನ ರಾಶಿ ಬಿದ್ದ ರಭಸಕ್ಕೆ ನದಿಯ ಇನ್ನೊಂದು ದಡದಲ್ಲಿದ್ದ ಉಳುವರೆ ಗ್ರಾಮದ 8 ಮನೆಗಳು ಸಂಪೂರ್ಣ ನಾಶವಾಗಿದ್ದವು. 12ಕ್ಕೂ ಹೆಚ್ಚು ಮನೆಗಳಿಗೆ ಹಾನಿಯುಂಟಾಗಿತ್ತು. ದುರಂತ ನಡೆದು ವರ್ಷ ಕಳೆದರೂ ನದಿಗೆ ಬಿದ್ದ ಮಣ್ಣು ತೆರವು ಆಗಿಲ್ಲ. ಜೋರು ಮಳೆಗೆ ನದಿಯಲ್ಲಿ ನೀರಿನ ಮಟ್ಟ ಏರುತ್ತಿದ್ದಂತೆ ಪ್ರವಾಹ ಸ್ಥಿತಿ ಎದುರಾಗುವ ಭೀತಿ ಕಾಡುತ್ತದೆ. ನದಿಗೆ ಅಡ್ಡಲಾಗಿ ಮಣ್ಣು, ಕಲ್ಲುಗಳು ಇರುವುದರಿಂದ ನದಿ ಬೇಗನೆ ಉಕ್ಕೇರುವ ಆತಂಕವಿದೆ’ ಎಂದು ಉಳುವರೆ ಗ್ರಾಮದ ಜಗದೀಶ ಗೌಡ ತಿಳಿಸಿದರು.
‘ನದಿಯಲ್ಲಿನ ಹೂಳು ತೆಗೆಯಲು ತಿಂಗಳ ಹಿಂದಷ್ಟೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ನದಿಯ ಮೇಲ್ಮೈನಿಂದ 6 ಮೀಟರ್ ಆಳದವರೆಗೆ ಹೂಳು ತೆಗೆಯಲು ಒಪ್ಪಿಗೆ ಸಿಕ್ಕಿದೆ. 1.48 ಲಕ್ಷ ಕ್ಯುಬಿಕ್ ಮೀಟರ್ ಪ್ರಮಾಣದ ಮಣ್ಣಿನ ರಾಶಿ ಇರಬಹುದು ಎಂದು ಪ್ರಾಥಮಿಕ ಸಮೀಕ್ಷೆ ಮೂಲಕ ಪಡೆದ ವರದಿಯಲ್ಲಿ ಮಾಹಿತಿ ಲಭಿಸಿದೆ’ ಎಂದು ಬಂದರು ಜಲಸಾರಿಗೆ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಎಂ.ವಿ.ಪ್ರಸಾದ್ ತಿಳಿಸಿದರು.
ಗಂಗಾವಳಿ ನದಿಯಲ್ಲಿನ ಹೂಳು ತೆರವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ₹2 ಕೋಟಿ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ವಾರದೊಳಗೆ ಪೂರ್ಣವಾಗಲಿದೆ. –ಎಂ.ವಿ.ಪ್ರಸಾದ್ ಕಾರ್ಯನಿರ್ವಾಹಕ ಎಂಜಿನಿಯರ್ ಬಂದರು ಜಲಸಾರಿಗೆ ಮಂಡಳಿ
ಬಾರ್ಜ್ ಸಾಗುವುದು ಅನುಮಾನ! ‘ಗಂಗಾವಳಿ ನದಿಯಲ್ಲಿ ಶೇಖರಣೆಯಾದ ಹೂಳು ತೆರವಿಗೆ ಬಾರ್ಜ್ ಮೂಲಕ ಕಾರ್ಯಾಚರಣೆ ನಡೆಸುವುದು ಅನಿವಾರ್ಯ. ಬಾರ್ಜ್ ಅರಬ್ಬಿ ಸಮುದ್ರದ ಮೂಲಕ ತೆರಳಿ ಮಂಜಗುಣಿ ಬಳಿ ಸಂಗಮ ಪ್ರದೇಶದಿಂದ ನದಿಯಲ್ಲಿ ಸಾಗಬೇಕು. ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ಧ ಇರುವುದರಿಂದ ಬಾರ್ಜ್ ಸಾಗಲು ಕಷ್ಟವಾಗಬಹುದು’ ಎಂದು ಬಂದರು ಜಲಸಾರಿಗೆ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.