ಶಿರಸಿ: ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬದಲಾಗಿದೆ. ಉತ್ತರ ಕನ್ನಡ ಉಸ್ತುವಾರಿಯಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ವಿಜಯಪುರ ಜಿಲ್ಲೆ ಉಸ್ತುವಾರಿ ನೀಡಲಾಗಿದೆ.
ನಿರೀಕ್ಷೆಯಂತೆ ಉತ್ತರ ಕನ್ನಡ ಜಿಲ್ಲೆ ಉಸ್ತುವಾರಿಯನ್ನು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ವಹಿಸಲಾಗಿದೆ.
ಶಿವರಾಮ ಹೆಬ್ಬಾರ್ ಅವರಿಗೆ ಸಚಿವ ಸ್ಥಾನ ದೊರೆತ ಮೇಲೆ, ಉಸ್ತುವಾರಿ ನಿರ್ವಹಿಸುತ್ತಿದ್ದ ನೆರೆಯ ಬೆಳಗಾವಿ ಜಿಲ್ಲೆಯ ಶಶಿಕಲಾ ಜೊಲ್ಲೆ ಅವರ ಉತ್ತರ ಕನ್ನಡ ಭೇಟಿ ಅಪರೂಪವೇ ಆಗಿತ್ತು.
ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ, ಲಾಕ್ ಡೌನ್ ಆರಂಭವಾದ ಮೇಲೂ, ತೀರಾ ಇತ್ತೀಚೆಗೆ ಜಿಲ್ಲೆಗೆ ಒಮ್ಮೆ ಭೇಟಿ ನೀಡಿದ್ದ ಸಚಿವೆ ಜೊಲ್ಲೆ, ಅಧಿಕಾರಿಗಳ ಸಭೆ ನಡೆಸಿ ವಾಪಸ್ಸಾಗಿದ್ದರು.ಈಗ ಜಿಲ್ಲೆಯ ಸಚಿವರೇ ಉಸ್ತುವಾರಿಯ ಹೊಣೆ ಹೊತ್ತಿರುವುದು, ಆಡಳಿತ ಯಂತ್ರ ಚುರುಕುಗೊಳ್ಳಬಹುದೆಂಬ ನಿರೀಕ್ಷೆ, ಜನರದ್ದಾಗಿದೆ.
ಮೊದಲ ಬಾರಿಗೆ ಉಸ್ತುವಾರಿ: ಕಳೆದ ಮೂರು ದಶಕಗಳಲ್ಲಿ ಶಾಸಕ ಆರ್.ವಿ. ದೇಶಪಾಂಡೆ ಅವರೇ ಬಹುತೇಕ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸ್ಥಾನ ನಿರ್ವಹಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಒಮ್ಮೆ ಭಟ್ಕಳದ ಶಿವಾನಂದ ನಾಯ್ಕ, ಹಿಂದೆ ಶಿಕ್ಷಣ ಸಚಿವರಾಗಿದ್ದ, ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉಸ್ತುವಾರಿ ಸಚಿವ ಸ್ಥಾನ ನಿರ್ವಹಿಸಿದ್ದರು.
2013 ಹಾಗೂ 2018ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಆಯ್ಕೆ ಯಾಗಿದ್ದ ಶಿವರಾಮ ಹೆಬ್ಬಾರ್, 2019ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದೇ ಮೊದಲ ಬಾರಿಗೆ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ದೊರೆತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.