
ಶಿರಸಿ: ಇಲ್ಲಿನ ಗಣೇಶನಗರ ಅಂಗನವಾಡಿ ಕೇಂದ್ರ-6ರ ಹಿಂಭಾಗದಲ್ಲಿ ಗೌರಿ ನಾಯ್ಕ ಎಂಬುವರು ತೋಡುತ್ತಿರುವ ಬಾವಿ ಕಾಮಗಾರಿ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಹುಲಿಗೆಮ್ಮ ಮಂಗಳವಾರ ಭೇಟಿ ನೀಡಿ, ಪರಿಶೀಲಿಸಿದರು. ಇಲಾಖೆಯ ಅನುಮತಿ ಇಲ್ಲದೆ ತೋಡಲು ಅವಕಾಶವಿಲ್ಲ ಎಂದು ಸೂಚಿಸಿದರು.
ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಸಾರ್ವಜನಿಕರು, ‘ಎರಡು ವಾರಗಳಿಂದ ಗೌರಿ ನಾಯ್ಕ ಬಾವಿ ತೋಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಅವರಿಗೆ ಹೀಗೆ ಅಡ್ಡಿಪಡಿಸುವುದು ಸರಿಯಲ್ಲ’ ಎಂದರು. ‘ಬಾವಿ ತೋಡುವುದು ತಪ್ಪೆಂದರೆ, ನಾನು ನಿಲ್ಲಿಸುವೆ. ಇದರಿಂದ ನನಗೇನೂ ನಷ್ಟವಿಲ್ಲ’ ಎಂದು ಗೌರಿ ನಾಯ್ಕ ಹೇಳಿದರು.
ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಹುಲಿಗೆಮ್ಮ ಮಾತನಾಡಿ, ‘ಗೌರಿ ನಾಯ್ಕ ಅವರ ಕಾರ್ಯ ಶ್ಲಾಘನೀಯ. ಆದರೆ, ಸರ್ಕಾರಿ ಇಲಾಖೆಯ ಅನುಮತಿಯಿಲ್ಲದೇ ಬಾವಿ ತೋಡಲು ಅವಕಾಶವಿಲ್ಲ. ಈ ಕಾರಣ ಸಮಗ್ರ ವರದಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ್ ಕಾಂದು ಅವರಿಗೆ ಸಲ್ಲಿಸಲಾಗುವುದು. ಅವರು ನೀಡುವ ಸೂಚನೆ ಅನುಸರಿಸಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.
ತಹಶೀಲ್ದಾರ್ ಶ್ರೀಧರ ಮುಂದಲಮನಿ, ತಾಲ್ಲೂಕು ಪಂಚಾಯಿತಿ ಇಒ ಸತೀಶ ಹೆಗಡೆ, ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.