ADVERTISEMENT

ಶಿರಸಿ | ತಾಡಪತ್ರಿ ಸಿಗದೆ ರೈತರಿಗೆ ತಾಪತ್ರಯ

ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲ: ಮಳೆ ಆರಂಭವಾದರೂ ವಿತರಣೆ ನಡೆದಿಲ್ಲ

ರಾಜೇಂದ್ರ ಹೆಗಡೆ
Published 18 ಜೂನ್ 2025, 5:24 IST
Last Updated 18 ಜೂನ್ 2025, 5:24 IST
ಶಿರಸಿ ತಾಲ್ಲೂಕಿನ ದಾಸನಕೊಪ್ಪದಲ್ಲಿ ಮಳೆಗೆ ಸಿಕ್ಕಿರುವ ಮೆಕ್ಕೆಜೋಳದ ಕಾಳುಗಳು ಮೊಳಕೆ ಬಂದಿರುವುದು 
ಶಿರಸಿ ತಾಲ್ಲೂಕಿನ ದಾಸನಕೊಪ್ಪದಲ್ಲಿ ಮಳೆಗೆ ಸಿಕ್ಕಿರುವ ಮೆಕ್ಕೆಜೋಳದ ಕಾಳುಗಳು ಮೊಳಕೆ ಬಂದಿರುವುದು    

ಶಿರಸಿ: ಮಳೆ ಹಾಗೂ ಮಂಜಿನ ವಾತಾವರಣದಿಂದ ಕೃಷಿ ಉತ್ಪನ್ನಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುವ ತಾಡಪತ್ರಿಗಳು ಕೃಷಿ ಇಲಾಖೆಗೆ ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಹವಾಮಾನ ವೈಪರೀತ್ಯದಂಥ ಸಂದರ್ಭದಲ್ಲಿ ಕೃಷಿಕರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. 

‘ಸರ್ಕಾರವು ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ತಾಡಪತ್ರಿಗಳನ್ನು ಸಹಾಯಧನದಲ್ಲಿ ರೈತರಿಗೆ ವಿತರಿಸುತ್ತದೆ. ಆದರೆ ರೈತರ ಬೇಡಿಕೆಯ ಶೇ 15ರಷ್ಟು ತಾಡಪತ್ರಿಗಳ ಪೂರೈಕೆ ಆಗುತ್ತಿಲ್ಲ. ಪ್ರತಿ ವರ್ಷ ವಿತರಣೆಯೂ ಆಗುತ್ತಿಲ್ಲ. ಇದರಿಂದ ಅಕಾಲಿಕ ಮಳೆಯಂಥ ಸಂದರ್ಭದಲ್ಲಿ ರೈತರು ಬೆಳೆ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹೆಣಗುವ ಸ್ಥಿತಿಯಿದೆ’ ಎಂಬುದು ರೈತರ ದೂರು.

‘ಈ ಬಾರಿ ಮುಂಗಾರುಪೂರ್ವ ಮಳೆ ಬೀಳುವ ವೇಳೆ ಮೆಕ್ಕೆಜೋಳ ಕಟಾವಿಗೆ ಬಂದಿತ್ತು. ಕೊಯ್ಲು ಮಾಡಿ ಒಣಹಾಕಿದ್ದ ಕೆಲ ಮೆಕ್ಕೆಜೋಳದ ತೆನೆಗಳು ಮೊಳಕೆಯೊಡೆದು ನಷ್ಟ ಉಂಟಾಯಿತು. ಮಳೆಯಿಂದ ರಕ್ಷಿಸಿಕೊಳ್ಳಲು ತಾಡಪತ್ರಿಯಿಲ್ಲದ ಕಾರಣ ಲಕ್ಷಾಂತರ ರೂಪಾಯಿ ಬೆಳೆ ನಾಶವಾಗಿತ್ತು. ಮುಂಗಾರು ಆರಂಭದೊಂದಿಗೆ ಮನೆ ಬಾಗಿಲಲ್ಲಿ ಜೋಳದ ಕಾಳುಗಳನ್ನು ಒಣಗಿ ಹಾಕಿದ್ದ ರೈತರಿಗೆ ಮತ್ತದೇ ಆಘಾತವಾಗಿದೆ. ಬಹುತೇಕ ರೈತರು ಸಾಲಸೋಲ ಮಾಡಿ ಮೆಕ್ಕೆಜೋಳ ಬೆಳೆದಿದ್ದರು. ಹಾಕಿದ ಬಂಡವಾಳ ಕೂಡ ಕೈಸೇರಿಲ್ಲ. ಕೃಷಿ ಇಲಾಖೆಯಿಂದ ತಾಡಪತ್ರಿ ನೀಡಿದ್ದರೆ ಮುಚ್ಚಿ ರಕ್ಷಣೆ ಮಾಡಿಕೊಳ್ಳಲು ಅನುಕೂಲ ಆಗುತ್ತಿತ್ತು. ಬನವಾಸಿ ಹೋಬಳಿಯಲ್ಲಿ ಇಂಥ ಸಮಸ್ಯೆಯ ಕಾರಣಕ್ಕೇ 50 ಎಕರೆಯಲ್ಲಿ ಬೆಳೆದ ಮೆಕ್ಕೆಜೋಳ ಮಳೆಯ ಪಾಲಾಗುವಂತಾಗಿದೆ’ ಎಂದು ಬೆಳೆಗಾರರು ಸಮಸ್ಯೆ ಹೇಳಿಕೊಂಡರು.

ADVERTISEMENT

‘ಹಲವು ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ತಾಡಪತ್ರಿಗಾಗಿ ಅರ್ಜಿ ಸಲ್ಲಿಸುತ್ತಿದ್ದೇವೆ. ಆದರೆ ಈವರೆಗೆ ವಿತರಿಸಿಲ್ಲ. ಸ್ವಂತ ಖರ್ಚಿನಲ್ಲಿ ಖರೀದಿಸುವ ರೈತರು ಮಾರುಕಟ್ಟೆಯಿಂದ ಖರೀದಿಸುತ್ತಾರೆ. ಆದರೆ ಬಡ ರೈತರು ಕೃಷಿ ಇಲಾಖೆ ಸಹಾಯಧನದಡಿ ನೀಡುವ ತಾಡಪತ್ರಿಯನ್ನೇ ನಂಬಿದ್ದಾರೆ’ ಎನ್ನುತ್ತಾರೆ ಮೆಕ್ಕೆಜೋಳ ಬೆಳೆಗಾರ ಮಹಾಂತೇಶ ನಾಯ್ಕ. 

‘2024–25ನೇ ಸಾಲಿನಲ್ಲಿ ಶಿರಸಿ ತಾಲ್ಲೂಕಿಗೆ 400 ತಾಡಪತ್ರಿಗಳು ಬಂದಿದ್ದು, ಆಯಾ ರೈತ ಸಂಪ‍ರ್ಕ ಕೇಂದ್ರಗಳಿಗೆ ಹಂಚಲಾಗಿದೆ. ಗ್ರಾಮ ಪಂಚಾಯಿತಿವಾರು ಫಲಾನುಭವಿಗಳ ಆಯ್ಕೆ ಮಾಡಿ ವಿತರಿಸಲು ಸೂಚಿಸಲಾಗಿದೆ. ಆದರೆ ಈವರೆಗೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಾಗಲೀ, ವಿತರಣೆಯಾಗಲೀ ಆರಂಭವಾಗಿಲ್ಲ. ಮಳೆಗಾಲ ಆರಂಭವಾಗಿದ್ದು ಕೃಷಿ ಉತ್ಪನ್ನಗಳ ರಕ್ಷಣೆಗೆ ಸವಾಲಾಗಿದೆ. ಇಂಥ ಸಂದರ್ಭದಲ್ಲಿಯೂ ತಾಡಪತ್ರಿ ವಿತರಿಸದಿದ್ದರೆ ಇನ್ಯಾವಾಗ ನೀಡುವುದು? ಎಂದು ರೈತ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

3,000 ಸಾವಿರ ತಾಡಪತ್ರಿ ಬೇಡಿಕೆ 400 ಪೂರೈಕೆ 1,200 ಪ್ರತಿ ತಾಡಪತ್ರಿಗೆ ಸಹಾಯಧನ

ಪ್ರತಿ ವರ್ಷ ಬನವಾಸಿ ಹೋಬಳಿಯ ರೈತರಿಂದ ತಾಡಪತ್ರಿಗಾಗಿ ಸಾಕಷ್ಟು ಬೇಡಿಕೆ ಬರುತ್ತದೆ. ಸರ್ಕಾರದಿಂದ ಪೂರೈಕೆಯಾಗುವ 300–400 ತಾಡಪತ್ರಿಗಳನ್ನು ಇಡೀ ತಾಲ್ಲೂಕಿಗೆ ವಿತರಿಸಲಾಗುತ್ತದೆ. ಈ ಬಗ್ಗೆ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ
ಮಧುಕರ ನಾಯ್ಕ ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ತಾಡಪತ್ರಿಗೆ ₹1200 ಸಹಾಯಧನ ‘ಮೆಕ್ಕೆಜೋಳ ಮೆಣಸಿನಕಾಯಿ ಭತ್ತ ಇತರ ಉತ್ಪನ್ನಗಳನ್ನು ಮಳೆಗಾಲದಲ್ಲಿ ಒಕ್ಕಲು ಮಾಡಲು ಅನುಕೂಲವಾಗಿ ರೈತರು ತಾಡಪತ್ರಿಯನ್ನು ಬಳಸಿಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿ ಒಂದು ತಾಡಪತ್ರಿಗೆ ಕನಿಷ್ಠ ₹2750 ಇದ್ದು ಕೃಷಿ ಇಲಾಖೆಯಿಂದ ರೈತರಿಗೆ ನೀಡುವ ತಾಡಪತ್ರಿ ಬೆಲೆ ₹1550. ಪ್ರತಿ ತಾಡಪತ್ರಿಗೆ ರೈತರಿಗೆ ₹1200 ಸಹಾಯಧನ ಲಭ್ಯವಿದೆ. ಈ ಕಾರಣಕ್ಕೆ ರೈತರು ಕೃಷಿ ಇಲಾಖೆಯ ಸಹಾಯಧನದಡಿ ಸಿಗುವ ತಾಡಪತ್ರಿಗಾಗಿ ಅರ್ಜಿ ಸಲ್ಲಿಸುತ್ತಾರೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.