ADVERTISEMENT

ಶಿರಸಿ: ಭತ್ತದ ಹುಲ್ಲಿನ ದರ ಗಗನಮುಖಿ

ಫಸಲು ನಷ್ಟ ಎದುರಿಸಿದ್ದ ಕೃಷಿಕರಿಗೆ ಸಮಾಧಾನ, ಹೈನುಗಾರರಿಗೆ ನಿರಾಸೆ

ರಾಜೇಂದ್ರ ಹೆಗಡೆ
Published 2 ಜನವರಿ 2025, 4:30 IST
Last Updated 2 ಜನವರಿ 2025, 4:30 IST
ಶಿರಸಿಯ ಬನವಾಸಿ ಸಮೀಪದ ಗದ್ದೆಯಲ್ಲಿ ಮಾರುವ ಸಂಬಂಧ ಭತ್ತದ ಹುಲ್ಲು ರಾಶಿ ಹಾಕಿರುವುದು
ಶಿರಸಿಯ ಬನವಾಸಿ ಸಮೀಪದ ಗದ್ದೆಯಲ್ಲಿ ಮಾರುವ ಸಂಬಂಧ ಭತ್ತದ ಹುಲ್ಲು ರಾಶಿ ಹಾಕಿರುವುದು   

ಶಿರಸಿ: ಅತಿವೃಷ್ಟಿ, ಅಕಾಲಿಕ ಮಳೆ, ಭತ್ತದ ಕ್ಷೇತ್ರ ಇಳಿಕೆಯ ಕಾರಣ ಜಾನುವಾರುಗಳ ಪ್ರಮುಖ ಆಹಾರವಾಗಿರುವ ಭತ್ತದ ಹುಲ್ಲಿನ ದರ ಏರಿಕೆಯಾಗಿದೆ. ಭತ್ಕ್ಕೆ ಇಲ್ಲದ ಬೆಲೆ ಹುಲ್ಲಿಗೆ ಬಂದಿರುವುದು ಕೃಷಿಕರಿಗೆ ಸಮಾಧಾನವಾದರೆ, ಹೈನುಗಾರರಿಗೆ ಚಿಂತೆ ತಂದಿದೆ.

ಒಂದು ಕ್ವಿಂಟಾಲ್ ಭತ್ತಕ್ಕೆ ₹1,800- ₹2,200 ದರ ಇದ್ದರೆ, ಅದೇ 100 ಕಂತೆ ಭತ್ತದ ಹುಲ್ಲು ₹3,000 ಸಾವಿರ ಗಡಿ ದಾಟುತ್ತಿದೆ. ತಾಲ್ಲೂಕಿನಲ್ಲಿ ಭತ್ತದ ಹುಲ್ಲಿಗೆ ವಾರ್ಷಿಕ ಸರಾಸರಿ 10 ಸಾವಿರ ಲೋಡ್‍ಗೂ ಹೆಚ್ಚಿನ ಬೇಡಿಕೆಯಿದ್ದು, ಅಷ್ಟೇ ಪ್ರಮಾಣದಲ್ಲಿ ಪೂರೈಕೆಯೂ ನಡೆಯುತ್ತದೆ. 

‘ಈ ಹಿಂದೆ ಒಂದು ಸೂಡಿ (ಸಣ್ಣ ಕಟ್ಟು) ಭತ್ತದ ಹುಲ್ಲು ₹25 ರಿಂದ ₹35ಕ್ಕೆ ಸಿಗುತ್ತಿತ್ತು. ಆದರೆ ಈ ಬಾರಿ ಈಗಲೇ ₹40- ₹50ಗೆ ಏರಿಕೆಯಾಗಿದೆ. ಹಾಲು ಕರೆಯುವ ಒಂದು ಹಸುವಿಗೆ ವಾರ್ಷಿಕ 300ರಿಂದ 400 ಕಟ್ಟು ಹುಲ್ಲು ಬೇಕಾಗುತ್ತದೆ. ಹಾಲಿನ ಗುಣಮಟ್ಟ ಹೆಚ್ಚಿಸಲು ಜಾನುವಾರುಗಳಿಗೆ ಭತ್ತದ ಒಣಹುಲ್ಲು ನೀಡುವುದು ಅನಿವಾರ್ಯ. ಬೆಲೆ ಏರಿಕೆಯಿಂದ ಹೈನುಗಾರರ ಆದಾಯಕ್ಕೆ ಹೊಡೆತವಿದೆ’ ಎಂದು ಹೈನುಗಾರ ರಾಮಚಂದ್‌ರ ಹೆಗಡೆ ಹೇಳುತ್ತಾರೆ.

ADVERTISEMENT

‘ಬೇಸಾಯ, ರಸಗೊಬ್ಬರ, ಆಳು ಕಾಳಿನ ಕೆಲಸ ಎಲ್ಲ ಸೇರಿ ಭತ್ತದ ಗದ್ದೆ ಮಾಡಿದರೆ ಏನೂ ಗೀಟುವುದಿಲ್ಲ. ಬಹುತೇಕ ಭತ್ತದ ಗದ್ದೆಗಳು ಅಡಿಕೆ, ಅನಾನಸ್, ಶುಂಠಿ ತೋಟಗಳಾಗಿ ಬದಲಾಗಿವೆ. ಸಾಂಪ್ರದಾಯಿಕ ಕೃಷಿ, ಭತ್ತದ ಬೆಳೆಯನ್ನು ಈಚೆಗೆ ಕಡೆಗಣಿಸಲಾಗುತ್ತಿದೆ. ಇದು ಹುಲ್ಲಿನ ದರ ಏರಿಕೆಗೆ ಕಾರಣದಲ್ಲೊಂದು’ ಎಂದು ಬನವಾಸಿ ಭಾಗದ ಕೃಷಿಕರೊಬ್ಬರು ಹೇಳಿದರು.

‘ಅತಿಯಾದ ಮಳೆಯಿಂದ ಶೇಕಡಾ 60ರಷ್ಟು ಭತ್ತ ಬೆಳೆ ನಾಶವಾಗಿತ್ತು. ಕಟಾವು ಸಂದರ್ಭದಲ್ಲಿ ಅಕಾಲಿಕ ಮಳೆ ಬಂದ ಕಾರಣ ಇರುವ ಭತ್ತ, ಹುಲ್ಲು ಕೂಡ ಮುಗ್ಗಲು ಹಿಡಿದು ನಷ್ಟವಾಗಿತ್ತು. ಹೀಗಾಗಿ ಮಳೆಗೆ ಸಿಗದೆ ಉತ್ತಮವಾಗಿರುವ ಭತ್ತದ ಹುಲ್ಲಿಗೆ ವಿಪರೀತ ಬೇಡಿಕೆ ಬಂದಿದೆ' ಎನ್ನುತ್ತಾರೆ ಕೃಷಿಕ ಬಸವರಾಜ ಗೌಡ.

‘ಶುಂಠಿಯನ್ನು ಭೂಮಿಗೆ ಬಿತ್ತಿದ ಕೂಡಲೆ ಭೂಮಿಯ ಮೇಲ್ಪದರಿಗೆ ಭತ್ತದ ಹುಲ್ಲು ಹಾಸಲಾಗುತ್ತದೆ. ಒಂದು ಎಕರೆಗೆ ಕನಿಷ್ಠ 100ರಿಂದ 150 ಕಟ್ಟು ಹುಲ್ಲಿನ ಅಗತ್ಯತೆ ಇದೆ. ಹಾಗಾಗಿ, ನೂರಾರು ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆಯುವವರಿಗೆ ಹೆಚ್ಚು ಹುಲ್ಲಿನ ಅವಶ್ಯಕತೆ ಇದೆ. ಇದು ಕೂಡ ಹುಲ್ಲಿನ ಬೇಡಿಕೆ ಹೆಚ್ಚಿ, ದರ ಹೆಚ್ಚಲು ಕಾರಣವಾಗಿದೆ’ ಎನ್ನುತ್ತಾರೆ ಅವರು.

ಹವಾಮಾನ ವೈಪರಿತ್ಯದಿಂದ ಭತ್ತದ ಕೃಷಿಕರಿಗೆ ಸಾಕಷ್ಟು ನಷ್ಟವಾಗಿತ್ತು. ಉತ್ತಮ ಹುಲ್ಲಿಗೆ ದರ ಲಭಿಸುತ್ತಿದ್ದು ಬೆಳೆಗಾರರ ಚೇತರಿಕೆಗೆ ಕಾರಣವಾಗಿದೆ
ದೇವರಾಜ ನಾಯ್ಕ ಭತ್ತ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.