ಕಾರವಾರ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರವು ಗುರುವಾರ ಆದೇಶಿಸಿದೆ. ಅವರನ್ನು ಬೆಂಗಳೂರಿನ ಸಿ.ಐ.ಡಿ.ಗೆ ಎಸ್.ಪಿ.ಯನ್ನಾಗಿ ನೇಮಕ ಮಾಡಲಾಗಿದೆ.
ಉತ್ತರ ಕನ್ನಡದ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ, 2012ರ ಐ.ಪಿ.ಎಸ್ ಅಧಿಕಾರಿ ಎನ್.ವಿಷ್ಣುವರ್ಧನ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಅವರು ಪ್ರಸ್ತುತ ಬೆಂಗಳೂರಿನ ಗುಪ್ತಚರ ಇಲಾಖೆಯ ಎಸ್.ಪಿ.ಯಾಗಿದ್ದಾರೆ.
2013ರ ಬ್ಯಾಚ್ನ ಐ.ಪಿ.ಎಸ್ ಅಧಿಕಾರಿಯಾಗಿರುವ ಡಾ.ಸುಮನ್ ಪೆನ್ನೇಕರ್, 2021ರ ಅ.30ರಂದು ಜಿಲ್ಲೆಗೆ ವರ್ಗಾವಣೆಯಾಗಿದ್ದರು. ತಮ್ಮ ಕಟ್ಟುನಿಟ್ಟಿನ ಕರ್ತವ್ಯ ಪಾಲನೆಯಿಂದ ಅಲ್ಪಾವಧಿಯಲ್ಲೇ ಜಿಲ್ಲೆಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದರು. ಮಟ್ಕಾ ದಂಧೆ, ಅಕ್ರಮ ಮರಳು ಗಣಿಗಾರಿಕೆಯನ್ನು ನಿಯಂತ್ರಿಸಲು ಶ್ರಮಿಸಿದ್ದರು.
ಅವರ ವರ್ಗಾವಣೆಗೆ ಜಿಲ್ಲೆಯ ಕೆಲವು ಪ್ರಮಖ ರಾಜಕಾರಣಿಗಳು ಹಾಗೂ ಇತರ ಪ್ರಭಾವಿಗಳು ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಗೀಡಾಗಿತ್ತು. ಅವರನ್ನು ವರ್ಗಾವಣೆ ಮಾಡದಂತೆ ಹಲವರು ಸುದ್ದಿಗೋಷ್ಠಿಗಳಲ್ಲೂ ಒತ್ತಾಯಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.