ದಾಂಡೇಲಿ: ನಗರಸಭೆಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 2021ರ ಏಪ್ರಿಲ್ ತಿಂಗಳಿನಿಂದ ವಾಣಿಜ್ಯ ನೀರಿನ ಕರ ಹೆಚ್ಚಿಸುವ ಕುರಿತು ಮಂಡಿಸಲಾದ ವಿಷಯದ ಮೇಲೆ ತೀವ್ರ ಚರ್ಚೆ ನಡೆಯಿತು. ನೀರಿನ ಕರ ಹೆಚ್ಚು ಮಾಡುವ ಸಲುವಾಗಿ ಎಲ್ಲ ಸದಸ್ಯರ ಒಪ್ಪಿಗೆ ಸಿಗದೆ ಕರ ಹೆಚ್ಚಿಸುವ ವಿಷಯವನ್ನು ಕೈ ಬಿಡಲಾಯಿತು.
ನಗರಸಭೆಯ ಸದಸ್ಯರಾದ ಮೋಹನ ಹಲವಾಯಿ ಮಾತನಾಡಿ, ಕಾಳಿ ನದಿ ನೀರನ್ನು ಪಕ್ಕದ ಜಿಲ್ಲೆಗೆ ಹರಿಸಲಾಗುತ್ತಿದ್ದು, ದಾಂಡೇಲಿ ಜನತೆಗೆ ಕಾಳಿ ನದಿ ನೀರಿನ ಲಾಭ ಸಿಗಬೇಕು. ಕಾಳಿ ನದಿಯ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಸಂಘಟನೆಗಳು ಹೋರಾಟ ಮಾಡುತ್ತಿರುವ ಸಮಯದಲ್ಲಿ ವಾಣಿಜ್ಯ ಉದ್ದೇಶಕ್ಕಾಗಲಿ ಅಥವಾ ಸಾರ್ವಜನಿಕರ ಕುಡಿಯುವ ನೀರಿನ ಬಾಳಕೆಯ ಮೇಲೆ ಯಾವುದೇ ರೀತಿಯ ಕರವನ್ನು ಹೆಚ್ಚಿಸ
ಬಾರದೆಂದು ಪಟ್ಟು ಹಿಡಿದಾಗ ವಿಷಯದ ಚರ್ಚೆ ಕೈ ಬಿಡಲಾಯಿತು. ಸದಸ್ಯರಾದ ಆಶ್ವಾಕ್ ಶೇಖ, ನಂದೀಶ ಮಂಗರವಾಡಿ ,ದಶರಥ ಬಂಡಿವಡ್ಡರ ಬೆಂಬಲ ಸೂಚಿಸಿದರು.
ಸ್ಥಾಯಿ ಸಮಿತಿಯ ಅಧ್ಯಕ್ಷ ಆದಂ ದೇಸೂರು, 1200 ಸಾವಿರ ಮನೆಗಳಿದ್ದು ಅಧಿಕೃತವಾಗಿ 6746 ಮನೆಗಳಿಗೆ ಮಾತ್ರ ನಳದ ಜೋಡಣೆಯ ದಾಖಲೆ ಇದೆ. ನಗರದ ಅನಧಿಕೃತ ನಳಗಳ ಜೋಡಣೆಯ ಬಗ್ಗೆ ಸಮೀಕ್ಷೆ ಆಗಬೇಕು ಎಂದರು.
ಪೌರಾಯುಕ್ತ ಗಣಪತಿ ಶಾಸ್ತ್ರಿ, ಮಂಗಳೂರು ಮಾದರಿಯಲ್ಲಿ ನಳಗಳ ಜೋಡಣೆ ಮತ್ತು ಸಮೀಕ್ಷೆಗೆ ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಿರುವ ಉದಾಹರಣೆ ತಿಳಿಸಿ, ಅದೇ ಮಾದರಿಯನ್ನು ನಗರದಲ್ಲಿ ಅಳವಡಿಸಿಕೊಳ್ಳಬಹುದು ಎಂಬ ಸಲಹೆಗೆ ಮುಂದಿನ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ಸಮ್ಮತಿ ನೀಡಿದರು.
ಸಭೆಯಲ್ಲಿ ಎಸ್ಎಫ್ಸಿ ಯೋಜನೆ ಅಡಿಯಲ್ಲಿ 2018, 2019, 2021 ಸಾಲಿಗೆ ಆಯ್ಕೆಯಾದ ವಿವಿಧ ಫಲಾನುಭವಿಗಳಿಗೆ ಅನುದಾನ ವಿತರಿಸಲು ಮತ್ತು ಸಂಡೆ ಮಾರುಕಟ್ಟೆಯ ಎರಡು ಅಂಗಡಿಗಳ ಹರಾಜಿಗೆ ಒಪ್ಪಿಗೆ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.