ಗೋಕರ್ಣ: ‘ರಕ್ತದಾನದಿಂದ ಒಬ್ಬರಿಗೆ ಜೀವದಾನ ಮಾಡಿದಂತಾಗುತ್ತದೆ. ನಿಯಮಿತವಾಗಿ ರಕ್ತದಾನ ಮಾಡುವುದರಿಂದ ದೇಹದಲ್ಲಿರುವ ಕೊಬ್ಬಿನ ಅಂಶ ಕಡಿಮೆ ಮಾಡಲು ಸಾಧ್ಯ’ ಎಂದು ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಎಸ್. ಅಹಲ್ಯಾ ಹೇಳಿದರು.
ಇಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಮೇಧಾದಕ್ಷಿಣಮೂರ್ತಿ ವೇದಭವನ ಸಂಸ್ಕೃತ ಮಹಾವಿದ್ಯಾಲಯ ಹಾಗೂ ಇತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತ ಮಹಾವಿದ್ಯಾಲಯ ಪರೀಕ್ಷಾಂಗ ಕುಲಸಚಿವ ರಾಮಕೃಷ್ಣ ಭಟ್ ಮಾತನಾಡಿ, ‘ರಕ್ತದಾನದಂತಹ ಮಾನವೀಯ ಮೌಲ್ಯಕ್ಕೆ ಯಾವ ಶಾಸ್ತ್ರವೂ ಅಡ್ಡಿ ಬರುವುದಿಲ್ಲ’ ಎಂದರು.
ಗೋಕರ್ಣದ ಹರಿಹರೇಶ್ವರ ವೇದವಿದ್ಯಾಪೀಠಂ ಪ್ರಾಚಾರ್ಯ ವೇ. ಉದಯ ಮಯ್ಯರ್, ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಶ್ರೀಧರ ಹಳ್ಗಾರ ಮಾತನಾಡಿದರು. ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯ ಮಂಜುನಾಥ ಭಟ್ ಮಾತನಾಡಿದರು. ವೇದಿಕೆಯ ಮೇಲೆ ರಾಜಗೋಪಾಲ ಅಡಿ, ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿಯ ನಿರ್ದೇಶಕ ದತ್ತಮೂರ್ತಿ ಕುಲಕರ್ಣಿ ಇದ್ದರು.
ಸಂಸ್ಕೃತ ಕಾಲೇಜಿನಲ್ಲಿ 40 ವರ್ಷ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮಹಾಬಲೇಶ್ವರ ಗೌಡ ಅವರನ್ನು ಸನ್ಮಾನಿಸಲಾಯಿತು. 100ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.