ADVERTISEMENT

ನಾಲ್ಕು ದೇಗುಲಗಳಲ್ಲಿ ಸರಣಿ ಕಳವು: ಒಂದೇ ತಂಡದ ಕೃತ್ಯದ ಶಂಕೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 15:14 IST
Last Updated 19 ನವೆಂಬರ್ 2022, 15:14 IST

ಕಾರವಾರ: ಯಲ್ಲಾಪುರ ಮತ್ತು ಅಂಕೋಲಾ ತಾಲ್ಲೂಕುಗಳ ನಾಲ್ಕು ದೇವಸ್ಥಾನಗಳಲ್ಲಿ ಶುಕ್ರವಾರ ಮತ್ತು ಶನಿವಾರ ಬೆಳಗಿನ ಜಾವದ ನಡುವೆ ಸರಣಿ ಕಳವು ನಡೆದಿದೆ. ಹುಂಡಿಗಳಲ್ಲಿದ್ದ ಅಪಾರ ಹಣ, ತಾಮ್ರ, ಹಿತ್ತಾಳೆಗಳ ಪೂಜಾ ಸಾಮಗ್ರಿ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಹೊತ್ತೊಯ್ದಿದ್ದಾರೆ.

ಕಳವು ಮಾಡಿರುವ ರೀತಿ ಮತ್ತು ಸಮಯವನ್ನು ಗಮನಿಸಿದಾಗ ನಾಲ್ಕೂ ಕಡೆಗಳಲ್ಲಿ ಒಂದೇ ತಂಡದ ಕೃತ್ಯ ಇದಾಗಿರುವ ಅನುಮಾನವಿದೆ. ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿ ಗ್ರಾಮದ ಮಹಾಗಜಲಕ್ಷ್ಮಿ ದೇಗುಲದ ಬಾಗಿಲಿನ ಬೀಗವನ್ನು ಒಡೆದು ಒಳನುಗ್ಗಿದ ಕಳ್ಳರು, ಹುಂಡಿಯನ್ನು ಒಡೆದಿದ್ದಾರೆ. ಅದರಲ್ಲಿದ್ದ ಸುಮಾರು ₹ 3 ಸಾವಿರ ಕಾಣಿಕೆ ಹಣ, ₹ 10 ಸಾವಿರ ಮೌಲ್ಯದ ಹಿತ್ತಾಳೆಯ ಎರಡು ಘಂಟೆಗಳು, ₹ 20 ಸಾವಿರ ಬೆಲೆಬಾಳುವ ತಾಮ್ರದ ಕಡಾಯಿ ಮತ್ತು ₹ 10 ಸಾವಿರ ಬೆಲೆಯ ಡಿ.ವಿ.ಆರ್ ಹೊತ್ತೊಯ್ದಿದ್ದಾರೆ.

ADVERTISEMENT

ಗುಳ್ಳಾಪುರದ ಶಿವ ವ್ಯಾಘ್ರೇಶ್ವರ ದೇವಾಲಯಕ್ಕೆ ನುಗ್ಗಿದ ಕಳ್ಳರು, ಹಿತ್ತಾಳೆಯ ದೊಡ್ಡ ಬಟ್ಟಲು, ಹಿತ್ತಾಳೆಯ ಎರಡು ತಂಬಾಳೆ, ತಾಮ್ರದ ಕೊಡ, ಹಿತ್ತಾಳೆಯ ಎರಡು ತಂಬಿಗೆಗಳು, ಹಿತ್ತಾಳೆಯ ದೊಡ್ಡ ಘಂಟೆ, ಹಿತ್ತಾಳೆಯ ದೊಡ್ಡ ದೀಪ, ತಾಮ್ರದ ಚೊಂಬು, ದೇವರ ಹಿತ್ತಾಳೆ ಪಾತ್ರೆ, ಹಿತ್ತಾಳೆ ಜಲ ಹರಣಿ ಕದ್ದಿದ್ದಾರೆ.

ಅಂಕೋಲಾ ತಾಲ್ಲೂಕಿನ ಡೊಂಗ್ರಿ ಗ್ರಾಮದ ಶೇವ್ಕಾರದ ಉಮಾ ಮಹೇಶ್ವರ ದೇಗುಲದಲ್ಲಿ ₹ 12 ಸಾವಿರ ಮೌಲ್ಯದ ಹಿತ್ತಾಳೆಯ ಘಂಟೆ, ₹ 2 ಸಾವಿರ ಮೊತ್ತದ ತಾಮ್ರದ ಕೊಡ, ₹ 4,500 ಮೌಲ್ಯದ ಹಿತ್ತಾಳೆಯ ಮೂರು ದೀಪದ ಕಂಬಗಳು ಹಾಗೂ ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು ₹ 20 ಸಾವಿರ ನಗದನ್ನು ದೋಚಿದ್ದಾರೆ.

ಹೆಗ್ಗಾರ ಗ್ರಾಮದಲ್ಲಿರುವ ಮಹಾಗಣಪತಿ ದೇವಸ್ಥಾನದಲ್ಲೂ ಕಳ್ಳರು ಕೈಗೆ ಸಿಕ್ಕಿದ್ದನ್ನು ದೋಚಿದ್ದಾರೆ. ₹ 12 ಸಾವಿರ ಮೌಲ್ಯದ ಹಿತ್ತಾಳೆಯ ಘಂಟೆ, ₹ 8 ಸಾವಿರದ ಹಿತ್ತಾಳೆಯ ದೀಪದ ಕಂಬ, ದೇವರ ಮೂರ್ತಿಗೆ ಅಲಂಕಾರ ಮಾಡಲಾಗಿದ್ದ ₹ 50 ಸಾವಿರ ಮೌಲ್ಯದ ಅಂದಾಜು ಒಂದೂವರೆ ಕೆ.ಜಿ ಬೆಳ್ಳಿ ಹಾಗೂ ಹಿತ್ತಾಳೆ ಮಿಶ್ರಿತ ಕವಚ ಹಾಗೂ ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು ₹ 10 ಸಾವಿರ ನಗದನ್ನು ಹೊತ್ತೊಯ್ದಿದ್ದಾರೆ.

ಯಲ್ಲಾ‍ಪುರ ಮತ್ತು ಅಂಕೋಲಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.