ADVERTISEMENT

ಕಚೇರಿಗೆ ಮುತ್ತಿಗೆ: ಆಕ್ರೋಶ

ಭಟ್ಕಳ ಪುರಸಭೆ ಕಾರ್ಯಾಲಯದ ಎದುರು ಉರ್ದು ನಾಮಫಲಕ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 5:16 IST
Last Updated 28 ಜೂನ್ 2022, 5:16 IST
ಭಟ್ಕಳ ಪುರಸಭೆಯ ಉರ್ದು ನಾಮಫಲಕ ತೆರವು ಮಾಡುವಂತೆ ಆಗ್ರಹಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು
ಭಟ್ಕಳ ಪುರಸಭೆಯ ಉರ್ದು ನಾಮಫಲಕ ತೆರವು ಮಾಡುವಂತೆ ಆಗ್ರಹಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು   

ಭಟ್ಕಳ: ಭಟ್ಕಳ ಪುರಸಭೆ ಕಾರ್ಯಾಲಯದ ಎದುರು ಉರ್ದು ನಾಮಫಲಕ ಅಳವಡಿಸುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು, ಹಿಂದೂ ಜಾಗರಣಾ ವೇದಿಕೆ ಹಾಗೂ ಭುವನೇಶ್ವರಿ ಕನ್ನಡ ಸಂಘಟನೆಗಳ ಕಾರ್ಯಕರ್ತರು ಪುರಸಭೆ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪುರಸಭೆ ಕಟ್ಟಡಕ್ಕೆ ಹೊಸದಾಗಿ ಬಣ್ಣ ಬಳಿದ ನಂತರ ಪುರಸಭೆ ಎದುರು ನಾಮಫಲಕ ಅಳವಡಿಸಲು ಗುತ್ತಿಗೆದಾರ ಸಿದ್ಧತೆ ಮಾಡಿಕೊಂಡಿದ್ದರು. ಕನ್ನಡ, ಇಂಗ್ಲಿಷ್‌ ನಂತರ ಉರ್ದು ಭಾಷೆಯಲ್ಲಿ ‘ಪುರಸಭಾ ಕಾರ್ಯಾಲಯ ಭಟ್ಕಳ’ ಎಂಬ ನಾಮಫಲಕ ಅಳವಡಿಸಲಾಗುತ್ತಿತ್ತು. ಇದನ್ನು ಗಮನಿಸಿದ ಈ ಸಂಘಟನೆಗಳ ಕಾರ್ಯಕರ್ತರು, ಉರ್ದು ನಾಮಫಲಕ ಅಳವಡಿಸದಂತೆ ಸ್ಥಳದಲ್ಲಿ ಗುಂಪು ಸೇರಿ ವಿರೋಧ ವ್ಯಕ್ತಪಡಿಸಿದರು. ಈ ಕೂಡಲೇ ನಾಮಫಲಕ ತೆರವು ಮಾಡುವಂತೆ ಪ್ರತಿಭಟನಾಕಾರರು ಪೊಲೀಸರೆದುರು ಪಟ್ಟುಹಿಡಿದರು.

ಇದರಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಸ್ಥಳಕ್ಕೆ ಬಂದ ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶೀಂಜೀ, ‘ಹಳೆ ಪುರಸಭೆ ಕಟ್ಟಡದಲ್ಲಿ ಪುರಸಭಾ ನಾಮಫಲಕವನ್ನು ಕನ್ನಡ, ಇಂಗ್ಲಿಷ್‌ ಹಾಗೂ ಉರ್ದು ಭಾಷೆಯಲ್ಲಿ ಬರೆಸಲಾಗಿತ್ತು. ಅದನ್ನೇ ಇಲ್ಲಿ ಅಳವಡಿಸಿದ್ದೇವೆ. ಹೊಸದಾಗಿ ನಾವೇನೂ ಬದಲಾವಣೆ ಮಾಡಿಲ್ಲ’ ಎಂದರು.

ADVERTISEMENT

ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಉರ್ದು ನಾಮಫಲಕ ತೆರವು ಮಾಡುವ ತನಕ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಮುಖಂಡರಾದ ಶ್ರೀಕಾಂತ ನಾಯ್ಕ, ರಾಘು ನಾಯ್ಕ, ಶ್ರೀನಿವಾಸ ನಾಯ್ಕ, ಕುಮಾರ ನಾಯ್ಕ, ತುಳಸಿದಾಸ ನಾಯ್ಕ ಪ್ರತಿಭಟನೆಯಲ್ಲಿ ಇದ್ದರು. ಸಿಪಿಐ ಮಹಾಬಲೇಶ್ವರ ನಾಯ್ಕ, ಪಿಎಸ್ಸೈಗಳಾದ ಸುಮಾ, ಭರತ್ ಹಾಗೂ ಹನುಮಂತಪ್ಪ ಕುಡುಗುಂಟಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.